ಪ್ರೀತಿಯ ಹೂಗಳು…

ಪರೀಕ್ಷೇಲಿ ಫೇಲಾದ್ರೇನಂತೆ, ಜೀವನದಲ್ಲಿ ಪಾಸಾಗಿ…!

Posted on: March 19, 2012

ಪಕ್ಕದ ಮನೆಯ ಸೌಮ್ಯಾ ಈ ಬಾರಿಯೂ ಡಿಸ್ಟಿಂಕ್ಷನ್. ಆಕೆಯ ತಮ್ಮ ಫಸ್ಟ್ ಕ್ಲಾಸು. ನಾನು ಮೊದಲೇ ವೀಕು. ಈ ಬಾರಿ ಪರೀಕ್ಷೆಯಲ್ಲಿ ಎಲ್ಲಾದರೂ ಪಾಸ್ ಆಗದೇ ಇದ್ದರೆ? ಇಲ್ಲ, ಪಾಸ್ ಆಗಲೇಬೇಕು. ಇಲ್ಲದೇ ಇದ್ದರೆ ಓರಗೆಯವರಿಗೆ ಮುಖ ತೋರಿಸಲು ಸಾಧ್ಯವಿಲ್ಲ. ಮನೆಯಲ್ಲಿ ಅಪ್ಪ ಬೈತಾರೆ. ಅಮ್ಮನೂ ಸುಮ್ಮನಿರುವುದಿಲ್ಲ. ನನ್ನದೇ ತರಗತಿಯವರು ಗೇಲಿ ಮಾಡಬಹುದು. ಇಲ್ಲ, ಆ ಅವಮಾನವನ್ನು ಎದುರಿಸಲಾರೆ. ಫೇಲಾದರೆ ನನ್ನ ಜೀವನವೇ ಮುಗಿದು ಹೋದಂತೆ.

ಇಂತಹ ಯೋಚನೆಯೇ? ಪರೀಕ್ಷೆಯಲ್ಲಿ ಫೇಲಾಗುತ್ತೀರಿ ಅನ್ನೋ ಭಯವೇ? ಬಿಡಿ, ನೀವು ಒಂದು ವೇಳೆ ಫೇಲಾದ್ರೂ ಅದು ಜಸ್ಟ್ ಪರೀಕ್ಷೆ ತಾನೇ? ಅದಕ್ಕೆ ಯಾಕೆ ಅಷ್ಟೊಂದು ಚಿಂತೆ ಮಾಡ್ತೀರಾ? ಒಂದು ಪರೀಕ್ಷೆಯಲ್ಲಿ ಆಗದಿದ್ರೆ ಇನ್ನೊಂದು. ಇನ್ನೊಮ್ಮೆ ಬರೀತಿನಿ, ಪಾಸ್ ಆಗೇ ಆಗ್ತೀನಿ ಅಂದ್ಕೊಳ್ಳಿ. ನೆನಪಿಡಿ, ಯಾವತ್ತೂ ಇಷ್ಟಕ್ಕೇ ಜೀವನ ಮುಗಿದು ಹೋಯ್ತು ಅನ್ನೋ ನಿರ್ಧಾರಕ್ಕೆ ಬರಬೇಡಿ.

ಜೀವನದ ಪರೀಕ್ಷೆ ದೊಡ್ಡದು…

ಒಂದು ವೇಳೆ ನೀವು ಪರೀಕ್ಷೆಯಲ್ಲಿ ಫೇಲಾದರೆ, ಅದು ನಿಮ್ಮ ವೈಫಲ್ಯ ಎಂದು ಯಾಕೆ ಅಂದುಕೊಳ್ಳುತ್ತೀರಿ. ಅದು ನಿಮ್ಮ ಪಾಲಕರು, ಶಿಕ್ಷಕರು ಮತ್ತು ಈ ಸಮಾಜದ ವೈಫಲ್ಯವೂ ಆಗಿರಬಹುದಲ್ಲವೇ? ಅಷ್ಟಕ್ಕೂ ನಿಮ್ಮ ಸೋಲು ಇನ್ನೂ ಆರಂಭವೇ ಆಗಿರುವುದಿಲ್ಲ. ಅದಕ್ಕೂ ಮೊದಲಿನ ತಯಾರಿಲ್ಲಷ್ಟೇ ನೀವಿರುತ್ತೀರಿ. ನೀವಿನ್ನೂ ಸ್ಪರ್ಧೆಯತ್ತ ಮುನ್ನುಗ್ಗುತ್ತಿರುತ್ತೀರಿ. ಆಗಲೇ ಸೋಲೊಪ್ಪಿಕೊಳ್ಳುವುದು ಹೇಗೆ ?

ಫಲಿತಾಂಶವೆಂಬ ಒಂದು ಚಿಕ್ಕ ಪದ, ಮೂರು ಗಂಟೆಗಳ ಕಾಲ ಬರೆಯುವ ಚಿಕ್ಕದೊಂದು ಪರೀಕ್ಷೆ ಇದಿಷ್ಟೇ ಜೀವನವೇ? ಅದಕ್ಕಾಗಿ ಜೀವ ಬಲಿ ಕೊಡೋ ನಿರ್ಧಾರ ಯಾಕೆ? ಹಾಗೆ ಮಾಡಿದರೆ ಮುಂದೆ ಇರೋ ಜೀವನದ ಪರೀಕ್ಷೆಯೇ ನಿಮ್ಮಿಂದ ಮಿಸ್ ಆಗುತ್ತೆ. ಪರೀಕ್ಷೆ ನೆಪದಲ್ಲಿ ಅದನ್ಯಾಕೆ ಮಿಸ್ ಮಾಡಿಕೊಳ್ಳುತ್ತೀರಿ? ಸಾಯುವ ದಾರಿ ನಿಮ್ಮದಲ್ಲ, ನಿಮ್ಮದು ಕಾಯುವ ದಾರಿ. ಮುಂದೆ ಏನೇನೋ ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆ. ಬರೀ ಪರೀಕ್ಷೆಯೇ ಎಲ್ಲವೂ ಅಲ್ಲ.

ಮರಳಿ ಯತ್ನಿಸಿ…

ಈ ಜಗತ್ತಿನಲ್ಲಿ ಒಂದೇ ಸಲಕ್ಕೆ ಯಾರೂ ಯಶಸ್ಸಿನ ಶಿಖರವನ್ನೇರಿಲ್ಲ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ವಿಜ್ಞಾನಿಯಾಗಿದ್ದೇ ಮನೆ ಮನೆಗೆ ಪೇಪರ್ ಹಾಕಿದ ನಂತರ. ವಾಜಪೇಯಿ, ಧೀರೂಬಾಯಿ ಅಂಬಾನಿ ಕೂಡ ಇದೇ ಹಾದಿಯಲ್ಲಿ ಸಾಗಿ ಗೆದ್ದವರು. ಇವರು ಯಾರೂ ರಾತೋರಾತ್ರಿ ಸಾಧನೆ ಮಾಡಿದವರಲ್ಲ. ಅದೆಷ್ಟೋ ಬಾರಿ ಸೋತವರು, ಅವಮಾನ ಅನುಭವಿಸಿದವರು. ಆದರೂ ಛಲ ಬಿಟ್ಟಿರಲಿಲ್ಲ. ಅವರ ಗುರಿ ಸ್ಪಷ್ಟವಾಗಿತ್ತು.

ಫೇಲಾಗಿದ್ದಕ್ಕೆ ನಿಮ್ಮ ಸ್ನೇಹಿತರು ಅಥವಾ ಬೇರೆ ಇನ್ಯಾರಾದ್ರೂ ಗೇಲಿ ಮಾಡ್ತಾರಾ? ತಲೆ ಕೆಡಿಸಿಕೊಳ್ಳಬೇಡಿ. ಡೋಂಟ್ ಕೇರ್ ಅನ್ನಿ. ಅವರು ನಿಮಗಿಂತ ಗ್ರೇಟ್ ಅಂತ ಆ ಕ್ಷಣಕ್ಕೆ ಅಂದುಕೊಂಡಿರಬಹುದು. ಆದರೆ ಆ ಕ್ಷಣವೇ ಜೀವನದ ಮಹತ್ವದ ಕ್ಷಣವಲ್ಲ. ಅದು ನಿಜವಾದ ಪರೀಕ್ಷೆಯೇ ಅಲ್ಲ. ಯಾವುದೋ ಪರೀಕ್ಷೆಯಲ್ಲಿ ಗೆದ್ದು ಕೈ ತುಂಬಾ ಸಂಬಳ ಪಡೆಯೋದೇ ಜೀವನವಲ್ಲ. ನೆಮ್ಮದಿಯ ಬದುಕಷ್ಟೇ ಬೇಕು ಎಂಬುದನ್ನು ಗಟ್ಟಿ ಮಾಡಿಕೊಳ್ಳಿ.

ಹೆತ್ತವರ ಬಗ್ಗೆ ಯೋಚಿಸಿ…

ಆತ್ಮಹತ್ಯೆ ಯೋಚನೆಯೇನೋ ತಟ್ಟನೆ ಬಂದು ಬಿಡಬಹುದು. ಆದರೆ ಇಷ್ಟು ವರ್ಷ ಸಲಹಿದವರ ಗತಿ? ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರಿಗೆ ಚಿಂತೆ ಇರಬಹುದು. ಹಾಗೆಂದು ಪರೀಕ್ಷೆಯಲ್ಲಿ ಪಾಸ್ ಆಗಿಲ್ಲವೆಂದ ಕೂಡಲೇ ನೀನು ಮಗನೇ ಅಲ್ಲ, ಮಗಳೇ ಅಲ್ಲ ಅಂತ ಯಾರಾದ್ರೂ ಹೇಳ್ತಾರಾ? ಹಾಗೆ ಆತ್ಮಹತ್ಯೆ ಮಾಡ್ಕೊಂಡ್ರೆ, ಮರುದಿನದಿಂದ ಆ ಹೆತ್ತವರು ಸುಖವಾಗಿ ಇರ್ತಾರಾ? ಅವರಿಗೆ ನೀವಿಲ್ಲದೆ ಬದುಕೋ ಸ್ಥೈರ್ಯ ಇರುತ್ತಾ? ಮಕ್ಕಳು ಎಷ್ಟೇ ದೊಡ್ಡವರಾದ್ರೂ, ಹೆತ್ತವರ ಪಾಲಿಗೆ ಕಂದಮ್ಮಗಳೇ. ಅವರೇನು ಮಾಡಿದ್ರೂ ಕ್ಷಮೆ ಇರುತ್ತೆ. ಸಾಯೋದು ಒಂದೇ ಪರಿಹಾರವಲ್ಲ.

ಸಾಧನೆಗೆ ಗುರಿಯಷ್ಟೇ ಸಾಕು…

ನೀವು ಪಾಸ್ ಆಗಿಯೇ ಎಲ್ಲವನ್ನೂ ಸಾಧಿಸಬೇಕಿಲ್ಲ. ಸಾಧನೆಗೆ ಬೇಕಾಗಿರುವುದು ಪರೀಕ್ಷೆಯ ಫಲಿತಾಂಶವಲ್ಲ. ಅಲ್ಲಿ ಬೇಕಾಗಿರುವುದು ಒಂದು ಸ್ಪಷ್ಟ ಗುರಿ. ಏನೋ ಮಾಡಬೇಕೆಂಬ ಛಲ. ಜತೆಗೊಂದಿಷ್ಟು ಆತ್ಮವಿಶ್ವಾಸ. ಎಲ್ಲದಕ್ಕೂ ಪರೀಕ್ಷೆಯೇ ಮಾನದಂಡವಲ್ಲ ಅಂದುಕೊಳ್ಳಿ. ಪರೀಕ್ಷೆಯಲ್ಲಿ ಫೇಲಾದ್ರೂ, ಜೀವನದಲ್ಲಿ ಗೆಲ್ತೀನಿ ಅನ್ನೋ ಗಟ್ಟಿ ನಿರ್ಧಾರವನ್ನು ಮಾಡಿಕೊಳ್ಳಿ. ನಿಮ್ಮನ್ನು ಸೋಲಿಸೋರು ಯಾರಿರ್ತಾರೆ?

ಓದದವರು ದಡ್ಡರಲ್ಲ..

ನಾವಿಂದು ರಾತ್ರಿಯನ್ನು ಹಗಲಿನಂತೆ ಕಳೆಯುತ್ತಿರುವ ಬಲ್ಬ್ ಪತ್ತೆ ಮಾಡಿದ್ದು ಥಾಮಸ್ ಎಡಿಸನ್. ನಂಬಿದ್ರೆ ನಂಬಿ, ಆತ ಶಾಲೆಗೆ ಹೋಗಿಯೇ ಇರಲಿಲ್ಲ. ಮೈಕ್ರೋಸಾಫ್ಟ್ ಎಂಬ ಸಾಫ್ಟ್‌ವೇರ್ ಕಂಪನಿಯ ಸಂಸ್ಥಾಪಕ ಬಿಲ್ ಗೇಟ್ಸ್ ಯಾರಿಗೆ ತಾನೇ ಗೊತ್ತಿಲ್ಲ? ಆದ್ರೆ ಅವನು ಓದಿರೋದು ಹತ್ತನೇ ತರಗತಿ ಮಾತ್ರ! ಅಮೆರಿಕಾದ ಹಣೆಬರಹವನ್ನೇ ಬದಲಿಸಿದ ಅಬ್ರಹಾಂ ಲಿಂಕನ್ ಕಾಲೇಜು ಮೆಟ್ಟಿಲನ್ನೇ ಹತ್ತಿರಲಿಲ್ಲ. ಇನ್ನೊಬ್ಬ ಅಧ್ಯಕ್ಷ ವಿನ್ಸ್ಟನ್ ಚರ್ಚಿಲ್ ಆರನೇ ಕ್ಲಾಸಲ್ಲೇ ಫೇಲಾಗಿದ್ದ. ಡೆಲ್ ಕಂಪನಿಯ ಬಾಸ್ ಮೈಕೆಲ್ ಡೆಲ್ ಪಿಯುಸಿ ಹಂತದಲ್ಲೇ ಕಾಲೇಜಿಗೆ ದೊಡ್ಡ ನಮಸ್ಕಾರ ಹೊಡೆದಿದ್ದ.

ಅಷ್ಟೆಲ್ಲ ಯಾಕೆ, ನಮ್ಮ ವರನಟ ಡಾ. ರಾಜ್‌ಕುಮಾರ್ ಪ್ರೈಮರಿ ವಿದ್ಯಾಭ್ಯಾಸವನ್ನೂ ಮುಗಿಸಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಈಗ ದೊಡ್ಡ ಹೆಸರು ಮಾಡಿರುವ ಪುನೀತ್ ರಾಜ್‌ಕುಮಾರ್, ದರ್ಶನ್ ಓದಿದ್ದೇ ಹತ್ತನೇ ಕ್ಲಾಸು. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಗಾದಿಗೇರಿರುವ ಅಖಿಲೇಶ್ ಯಾದವ್ ಕೂಡ ಫೇಲಾಗಿ ಪಾಸಾದವರು. ಅವರೆಲ್ಲ ಯಾವುದರಲ್ಲಿ ಕಡಿಮೆ?

(ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: