ಚದುರಂಗ ಚತುರ ಶಾಬ್ದಿಕ್
Posted January 10, 2013
on:ಚೆಸ್.. ಚೆಸ್.. ಚೆಸ್.. ಬೆಳಗ್ಗೆ ಎದ್ದರೆ ಚೆಸ್, ಮಧ್ಯಾಹ್ನ ಪುರುಸೊತ್ತು ಸಿಕ್ಕರೂ ಚೆಸ್, ರಾತ್ರಿಯೂ ಚೆಸ್.. ಹೀಗೆ ಚೆಸ್ ತಪಸ್ಸು ಮಾಡುತ್ತಾ, ಸಾಧನೆಯ ಶಿಖರವನ್ನೇರುತ್ತಿರುವ ಈ 14ರ ಹುಡುಗನ ಹೆಸರು ಶಾಬ್ದಿಕ್ ವರ್ಮಾ.
ತಲೆ ತಿನ್ನುವ ಚದುರಂಗದಾಟವನ್ನು ಶಾಬ್ದಿಕ್ ನಮ್ಮ-ನಿಮ್ಮಂತೆ ಶಾಲೆಗೆ ಹೋದ ನಂತರ, ಮೀಸೆ ಮೊಳೆತ ಮೇಲೆ ಕಲಿತವನಲ್ಲ; ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಈತ ಮೂರುವರೆ ವರ್ಷದವನ್ನಿದ್ದಾಗಲೇ ಚದುರಂಗದ ಬಿಲ್ಲೆಗಳೊಂದಿಗೆ ಆಟ ಶುರು ಮಾಡಿದ್ದ. ಆರನೇ ವರ್ಷದಲ್ಲಿ ಟೇಬಲ್ ಮುಂದೆ ಕುಳಿತು ಇತರರಿಗೆ ಸವಾಲೆಸೆದಿದ್ದ!
ಅದಾದ ಮೇಲೆ ಶಾಬ್ದಿಕ್ ಹಿಂತಿರುಗಿ ನೋಡಿಲ್ಲ. 2005ರಲ್ಲಿ ಸ್ಟೇಟ್ ಅಂಡರ್ 7 ಹಾಗೂ 2007ರಲ್ಲಿ ಸ್ಟೇಟ್ ಅಂಡರ್ 9ರ ಚಾಂಪಿಯನ್; ಬೆಂಗಳೂರಿನಲ್ಲಿ 2008ರಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ಪರ ಆಡಿ ಬೆಸ್ಟ್ ನ್ಯಾಷನಲ್ ಪ್ಲೇಯರ್ ಪ್ರಶಸ್ತಿ; ಮೂರು ಸಲ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಸೋಲರಿಯದ ಸರದಾರನಾಗಿದ್ದು; 2011ರಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳ ಚೆಸ್ ಚಾಂಪಿಯನ್ಶಿಪ್ನಲ್ಲಿ ರಾಜ್ಯ ತಂಡದ ಪರ ಬೆಳ್ಳಿಪದಕ ಹಾಗೂ ವೈಯಕ್ತಿಕ ವಿಭಾಗದಲ್ಲಿ ಬೋರ್ಡ್ ಮೆಡಲ್; 2012ರಲ್ಲಿ ಇದೇ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, ಕರ್ನಾಟಕ ಚೆಸ್ ತಂಡದ ನಾಯಕ.
ಒಟ್ಟಾರೆ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಏಳು ಪ್ರಥಮ, ನಾಲ್ಕು ದ್ವಿತೀಯ, ಎರಡು ತೃತೀಯ ಪ್ರಶಸ್ತಿಗಳನ್ನು ಶಾಬ್ದಿಕ್ ಬಗಲಿಗೆ ಹಾಕಿಕೊಂಡಿದ್ದಲ್ಲದೆ, ದೆಹಲಿಯಲ್ಲಿ ನಡೆದ ಏಳು ವರ್ಷದವರೊಳಗಿನ ಏಷ್ಯನ್ ಚಾಂಪಿಯನ್ಶಿಪ್, 2008ರಲ್ಲಿ ನಾಗ್ಪುರದಲ್ಲಿ ನಡೆದ 10ರೊಳಗಿನವರ ಕಾಮನ್ವೆಲ್ತ್ ಚಾಂಪಿಯನ್ಶಿಪ್ಗಳಲ್ಲಿ ಭಾಗವಹಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾನೆ.
ಇನ್ನು ಈ ಚೆಸ್ ಪೋರ ತನಗಿಂತ ಹಿರಿಯರ ಜತೆ ಆಡಿ ಗೆದ್ದಿರುವುದೇ ಹೆಚ್ಚು. ಅದರಲ್ಲೂ ಮಹಾರಾಷ್ಟ್ರದ ಕುಪವಾಡದಲ್ಲಿ ಇಬ್ಬರು ಅಂತಾರಾಷ್ಟ್ರೀಯ ಮಾಸ್ಟರ್ಗಳ ಜತೆ ಸೀನಿಯರ್ ಡಿವಿಜನ್ ರ್ಯಾಪಿಡ್ ಚೆಸ್ ಆಡಿ, ಮೊದಲ ಹತ್ತರೊಳಗೆ ಸ್ಥಾನ ಪಡೆದು ಭೇಷ್ ಎನಿಸಿಕೊಂಡಿದ್ದು ಹೆಮ್ಮೆ.
ಎಸ್ಡಿಎಂ ಹುಡುಗ: ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿರುವ ಶಾಬ್ದಿಕ್ ವರ್ಮಾ ಬೆಳ್ತಂಗಡಿಯ ವಕೀಲ ರತ್ನವರ್ಮ ಬುಣ್ಣು ಮತ್ತು ಧರ್ಮಸ್ಥಳದ ವೈದ್ಯೆ ಡಾ.ಮೃಣಾಲಿನಿ ದಂಪತಿಯ ಪುತ್ರ.
ಶಾಬ್ದಿಕ್ಗಾಗಿಯೇ ಬದುಕನ್ನು ಮುಡಿಪಾಗಿಟ್ಟಂತೆ ಇಬ್ಬರದ್ದೂ ಪ್ರೋತ್ಸಾಹ. ಮನೆಗೆ ಹೊಕ್ಕಾಗ ಪುಟ್ಟ ವಸ್ತು ಸಂಗ್ರಹಾಲಯವೇನೋ ಎಂಬ ಭಾವನೆ ಯಾರಿಗಾದರೂ ಬರದಿರದು. ಅಷ್ಟೊಂದು ಪ್ರಶಸ್ತಿ-ಪುರಸ್ಕಾರಗಳ ಗುಡ್ಡೆ.
ಡೆರಿಕ್ ಚೆಸ್ ಸ್ಕೂಲ್ ನಲ್ಲಿ ತರಬೇತಿ, ದೊಡ್ಡ ಟೂರ್ನಮೆಂಟ್ ಸಂದರ್ಭದಲ್ಲಿ ಅರವಿಂದ್ ಶಾಸ್ತ್ರಿಯವರ ಮಾರ್ಗದರ್ಶನ ಬಿಟ್ಟರೆ ಹೆತ್ತವರೇ ಶಾಬ್ದಿಕ್ಗೆ ಗುರುಗಳು. ಪ್ರೋತ್ಸಾಹದ ಮಾತುಗಳೇ ಸ್ಪೂರ್ತಿ. ಹೀಗೆ ಬೆನ್ನು ತಟ್ಟಿದವರಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪ್ರಮುಖರು.
ವಿಶ್ವಮಾನ್ಯ ಚತುರ: ಶಾಬ್ದಿಕ್ ವರ್ಮಾ ವಿಶ್ವ ಚೆಸ್ ಫೆಡರೇಷನ್ನಲ್ಲಿ 1791 ರೇಟಿಂಗ್ ಪಡೆದುಕೊಂಡಿದ್ದಾನೆ. ಈ ರೇಟಿಂಗ್ 2000ಕ್ಕೆ ಬರಬೇಕು ಎನ್ನುವುದು ಶಾಬ್ದಿಕ್ ಬಯಕೆ. ಅದಕ್ಕಾಗಿ ಕಠಿಣ ಶ್ರಮ ವಹಿಸುತ್ತಿದ್ದಾನೆ. ಹೀಗೆ ಆಡುತ್ತಲೇ ದೊಡ್ಡ ಸಾಧನೆ ಮಾಡಬೇಕೆನ್ನುವ ಶಾಬ್ದಿಕ್ಗೆ ಗ್ಯಾರಿ ಕ್ಯಾಸ್ಪರೋವ್ ರೋಲ್ ಮಾಡೆಲ್.
ಚತುರಮತಿಯಿವನು:
ಚೆಸ್ನಿಂದ ಬುದ್ಧಿಶಕ್ತಿ, ಏಕಾಗ್ರತೆ, ತಾಳ್ಮೆ ವೃದ್ಧಿಸುತ್ತದೆ ಎಂಬುದಕ್ಕೆ ಶಾಬ್ದಿಕ್ ಉತ್ತಮ ಉದಾಹರಣೆ. ಬೇರೆಡೆ ಪಂದ್ಯಗಳಿಗೆ ಹೋಗುವ ಸಂದರ್ಭದಲ್ಲಿ ತರಗತಿಯಿಂದ ದೂರ ಉಳಿಯುವ ಶಾಬ್ದಿಕ್, ನಂತರ ಇತರ ವಿದ್ಯಾರ್ಥಿಗಳಂತೆ ಪುಸ್ತಕದ ಹುಳುವಾಗಿರುವುದಿಲ್ಲ. ಒಮ್ಮೆ ಪಠ್ಯದ ಮೇಲೆ ಕಣ್ಣಾಡಿಸಿದರೆ ಸಾಕು, ಪರೀಕ್ಷೆಯಲ್ಲಿ ಉತ್ತಮ ಸ್ಕೋರ್ ಮಾಡುತ್ತಾನೆ ಎನ್ನುತ್ತಾರೆ ಶಾಬ್ದಿಕ್ ತಂದೆ ರತ್ನವರ್ಮ ಬುಣ್ಣು. ಇನ್ನು ಟಿವಿ ನೋಡುವುದೇ ಅಪರೂಪ, ಬೇರೆ ಮನರಂಜನೆಯತ್ತ ಆಸಕ್ತಿಯೇ ಇಲ್ಲ ಎನ್ನುವುದು ಶಾಬ್ದಿಕ್ ಪಾಲಿಗೆ ಕೊರತೆಯಲ್ಲ, ವಿಶೇಷ.
ಸಾಧನೆ ಬಯಕೆ:
ಚೆಸ್ನಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಬಯಕೆಯಿದೆ. ಈಗ ಆಟ-ಪಾಠ ಎರಡನ್ನೂ ಸಮಾನವಾಗಿ ಪರಿಗಣಿಸಿದ್ದೇನೆ. ಹತ್ತನೇ ತರಗತಿಯ ನಂತರ ಯಾವುದಕ್ಕೆ ಪ್ರಥಮ ಆದ್ಯತೆ ಎಂಬುದನ್ನು ನಿರ್ಧರಿಸುತ್ತೇನೆ.
– ಶಾಬ್ದಿಕ್ ವರ್ಮಾ, ಚೆಸ್ ಪ್ರತಿಭೆ
(ಈ ಲೇಖನ ವಿಜಯವಾಣಿಯಲ್ಲಿ ಪ್ರಕಟವಾಗಿದೆ)
ಕಡಲ ಮಕ್ಕಳ ಕಲರವ
Posted December 27, 2012
on:ರಾಮಾಯಣದ ಕಥೆಯೇನು ಎಂದು ಯಾರಾದರೂ ಕೇಳಿದರೆ, ಅದನ್ನು ವಿವರಿಸಲು ಗಂಟೆ ಸಾಲದು. ಹೀಗಿರುವಾಗ ಮೂರೇ ನಿಮಿಷದಲ್ಲಿ ರಾಮಾಯಣ ಹೇಳಿ, ನೃತ್ಯ ಪ್ರಸ್ತುತ ಪಡಿಸುವುದು ಹೇಗೆ? ಬೇರೆಯವರಿಗೆ ಅಚ್ಚರಿ, ಆದರೆ ‘ಓಷಿಯನ್ ಕಿಡ್ಸ್’ಗಳಿಗಲ್ಲ. ಇವರದನ್ನು ಮಾಡಿ ತೋರಿಸಿದ್ದಾರೆ!
ಹೌದು, ಇಂತಹ ಅಚ್ಚರಿಗಳಿಂದಲೇ ಇಂದು ಈ ಟ್ರೂಪ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇದು ಮಂಗಳೂರಿನ ಪೋರ-ಪೋರಿಯರದ್ದೇ ತಂಡವಾಗಿರುವುದು ಕರಾವಳಿಗರಿಗೆ ಹೆಮ್ಮೆ.
ಓಷಿಯನ್ ಕಿಡ್ಸ್ ಈಗೇನೂ ಹುಟ್ಟಿಕೊಂಡಿರುವುದಲ್ಲ. 1989ರಲ್ಲೇ ಆರಂಭವಾಗಿತ್ತು. ಆಗ ಕಡಲ ತಟದಲ್ಲೇ ಅಭ್ಯಾಸ ಮಾಡುತ್ತಿದ್ದುದರಿಂದ, ಟ್ರೂಪ್ ಹೆಸರಿಗೂ ಅದೇ ಸೇರಿಕೊಂಡಿತು. ವಿನೋದ್ ಸಿಕ್ವೇರಾ ಸ್ಥಾಪಿಸಿರುವ ಸಂಸ್ಥೆಯಲ್ಲೀಗ ಪ್ರಾಣೇಶ್ ಬೋಳಾರ್, ಪ್ರಮೋದ್ ಆಳ್ವ, ಪ್ರವೀಣ್ ಕುಮಾರ್ ಆಧಾರ ಸ್ತಂಭಗಳು. ಇಷ್ಟೂ ಮಂದಿಯ ಮಾರ್ಗದರ್ಶನದಲ್ಲಿ 30ಕ್ಕೂ ಹೆಚ್ಚು ವೃತ್ತಿಪರ ಸದಸ್ಯರಿದ್ದಾರೆ. ನೂರಾರು ಮಂದಿ ತರಬೇತಿ ಪಡೆಯುತ್ತಿದ್ದಾರೆ.
ಮಂಗಳೂರು, ಬೆಂಗಳೂರು, ಕುವೈತ್, ದುಬೈ, ಅಬುದಾಬಿ, ಶಾರ್ಜಾ, ಬಹರೈನ್ಗಳಲ್ಲಿ ‘ಓಷಿಯನ್ ಕಿಡ್ಸ್’ ಹರಡಿದೆ. ಸಂಸ್ಥೆಯಲ್ಲಿ ಇದುವರೆಗೆ ಒಟ್ಟು 5,000ಕ್ಕೂ ಹೆಚ್ಚು ಮಂದಿ ನೃತ್ಯ ಕಲಿತಿದ್ದಾರೆ. 250ಕ್ಕೂ ಹೆಚ್ಚು ಪ್ರಶಸ್ತಿಗಳು, ಸಾವಿರಕ್ಕೂ ಮಿಕ್ಕಿ ಸ್ಟೇಜ್ ಶೋ ನೀಡಿರುವ ಗರಿಮೆಯಿದೆ.
ವಿಷಯಾಧರಿತ ವಿಶೇಷ:
ಸ್ವಲ್ಪ ಕಷ್ಟಪಟ್ಟರೆ ಯಾರು ಬೇಕಾದರೂ ಕುಣಿಯಬಹುದು, ಅದರಲ್ಲೇನಿದೆ ವಿಶೇಷ ಎಂದು ಮೂಗು ಮುರಿಯುವವರು ತುಂಬಾ ಮಂದಿ ಇರಬಹುದು. ಆದರೆ ಅಂತವರು ‘ಓಷಿಯನ್ ಕಿಡ್ಸ್’ ಪ್ರದರ್ಶನ ನೋಡಿದ ನಂತರ ಅಭಿಪ್ರಾಯ ಬದಲಾಯಿಸಿಕೊಳ್ಳದೇ ಇರಲು ಸಾಧ್ಯವಿಲ್ಲ. ಇದಕ್ಕೆ ಕಾರಣ, ವಿಷಯಾಧರಿತ ವಿಶೇಷ ನೃತ್ಯ.
ಈ ಟ್ರೂಪ್ ನಿರ್ದಿಷ್ಟ ಕಾನ್ಸೆಪ್ಟ್ ಅಡಿಯಲ್ಲಿ ನೃತ್ಯ ಸಂಯೋಜಿಸುತ್ತದೆ. ಪೌರಾಣಿಕ ವಿಚಾರಗಳು, ಸಂಸ್ಕೃತಿ, ಸಾಮಾಜಿಕ ಸಂಗತಿಗಳು, ಜಾಗತಿಕ ತಾಪಮಾನ ಹೀಗೆ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿ, ಆ ಗೆರೆಯಲ್ಲಿ ಪ್ರದರ್ಶನ ಸಾಗುತ್ತದೆ. ಒಂದು ಕಡೆಯಿಂದ ಕಥೆ ಹೇಳಬೇಕು, ಇನ್ನೊಂದು ಕಡೆಯಿಂದ ನೃತ್ಯ ಸಾಗಬೇಕು. ಎರಡೂ ವಿಶಿಷ್ಟವಾಗಿರಬೇಕು. ಆ ಕಲೆಯನ್ನು ನಾವು ಮೈಗೂಡಿಸಿಕೊಂಡಿದ್ದೇವೆ ಎಂಬಂತೆ ತಂಡದ ಸದಸ್ಯರಲ್ಲಿ ಹುರುಪು ಕಾಣುತ್ತಿದೆ. ಅದಕ್ಕೇ ಇರಬೇಕು, ‘ದಿ ಆರ್ಟ್ ಆಫ್ ದಿ ಬಾಡಿ ಲಾಂಗ್ವೇಜ್’ ಎಂಬ ಅಡಿಬರಹವನ್ನು ಕಡಲ ಮಕ್ಕಳು ತೂಗಿಕೊಂಡಿರುವುದು.
ಇಂಡಿಯಾಸ್ ಗಾಟ್ ಟ್ಯಾಲೆಂಟ್:
ಕಲರ್ಸ್ ಚಾನೆಲ್ನಲ್ಲಿ ಪ್ರಸಾರವಾದ ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಶೋದಲ್ಲಿ ‘ಓಷಿಯನ್ ಕಿಡ್ಸ್’ ವಿಶ್ವದರ್ಶನವಾಗಿತ್ತು. ನೃತ್ಯ ರೂಪಕ ನೋಡಿದ ಲಕ್ಷೋಪಲಕ್ಷ ಮಂದಿ ಮೂಗಿನ ಮೇಲೆ ಬೆರಳಿಟ್ಟಿದ್ದರು. ನವದುರ್ಗೆಯರು, ರಾಮಾಯಣ, ಶಿವ ತಾಂಡವ ನೃತ್ಯ ರೂಪಕಗಳಿಗೆ ಸ್ವತಃ ಜಡ್ಜ್ಗಳೇ ಮೂಕರಾಗಿದ್ದರು. ಅದರಲ್ಲೂ ಕಿರಣ್ ಖೇರ್ ಅಂತೂ ಇವರ ಫ್ಯಾನ್ ಆಗಿಬಿಟ್ಟಿದ್ದರು.
ತಂಡ ಅರ್ಧದಲ್ಲೇ ಹೊರ ಬಿದ್ದಾಗ ಇದೇ ಕಿರಣ್ ಖೇರ್ ವೈಲ್ಡ್ ಕಾರ್ಡ್ ಮೂಲಕ ‘ಓಷಿಯನ್ ಕಿಡ್ಸ್’ಗೆ ಜೀವದಾನ ಕೊಟ್ಟಿದ್ದರು. ಆದರೂ ಕರಾವಳಿ ಪ್ರತಿಭೆಗಳಿಗೆ ಕಿರೀಟ ದಕ್ಕಲಿಲ್ಲ. ಸಿಗುತ್ತಿದ್ದರೆ ದೊಡ್ಡದಾಗಿ ಬೀಗಬಹುದಿತ್ತು. ಆದರೂ ತಲೆ ಎತ್ತಿ ನಡೆಯುವಷ್ಟು ಹೆಮ್ಮೆಯ ಪ್ರದರ್ಶನ ನೀಡಿದ್ದೇವೆ. ಉತ್ತರ ಭಾರತ ಮಾತ್ರವಲ್ಲ, ವಿದೇಶಗಳಿಂದಲೂ ಡ್ಯಾನ್ಸ್ಗಾಗಿ ಬೇಡಿಕೆ ಬರುತ್ತಿದೆ ಎಂದು ತಂಡ ಹೇಳಿಕೊಂಡಿದೆ.
ಹಳೆ ಕಲ್ಪನೆಯಲ್ಲಿ ಹೊಸತನ:
ಟಿವಿಯಲ್ಲಿ ಪೌರಾಣಿಕ ಆಧರಿತ ನೃತ್ಯ ಬಂದರೆ ರಿಮೋಟ್ ಒತ್ತಿ ಚಾನೆಲ್ ಬದಲಿಸುವವರೇ ಜಾಸ್ತಿ. ಆದರೆ ಹಾಗಾಗಬಾರದು. ಪುರಾಣಕ್ಕೆ ಧಕ್ಕೆಯಾಗದಂತೆ ಮತ್ತು ಯುವ ಜನಾಂಗ ನೋಡುವಂತಿರಬೇಕು. ಯಾವುದೋ ಒಂದು ಸಂದೇಶ ಅರಿವಿಗೆ ಬರದಂತೆ ತಲುಪಬೇಕು. ಹೀಗೆ ಯೋಚಿಸಿದಾಗ ಹುಟ್ಟಿದ್ದೇ ರಾಮಾಯಣ, ಶಿವತಾಂಡವ.
ಇಲ್ಲಿ ಬಳಸಲಾಗಿರುವ ಕಾನ್ಸೆಪ್ಟ್ ಹೊಸತೇನಲ್ಲ. ಆದರೆ ಅದನ್ನು ಹೊಸ ರೀತಿಯಲ್ಲಿ ಪ್ರೆಸೆಂಟ್ ಮಾಡಲಾಗಿದೆ. ಹಳೆ ಶೈಲಿಯಲ್ಲಿರುವಂತೆಯೇ ಈಗಿನ ಪೀಳಿಗೆಗೆ ಇಷ್ಟವಾಗುವ ರೀತಿಯಲ್ಲಿ ಸಂಯೋಜಿಸಲಾಗಿದೆ. ಶಾಸ್ತ್ರೀಯ ನೃತ್ಯವನ್ನು ಅಳವಡಿಸಲಾಗಿದೆ. ಹಾಗಾಗಿಯೇ ಜನಪ್ರಿಯವಾಯಿತು ಅನ್ನೋದು ಟೀಮ್ ಅಭಿಪ್ರಾಯ.
ಎಲ್ಲದರಲ್ಲೂ ಸೈ:
‘ಓಷಿಯನ್ ಕಿಡ್ಸ್’ ವಿಷಯಾಧರಿತ ನೃತ್ಯಗಳಿಂದ ಮಾತ್ರ ಪ್ರಸಿದ್ಧವಲ್ಲ. ಬಾಲಿವುಡ್ ಶೈಲಿಯಲ್ಲಿ ಹಿಪ್-ಹಾಪ್, ಬಾಂಗ್ರಾ, ವೆಸ್ಟರ್ನ್ ಫ್ರೀಸ್ಟೈಲ್, ಸಾಲ್ಸಾ, ಭಾರತೀಯ ನೃತ್ಯ ಪ್ರಕಾರಗಳಾದ ಭರತ ನಾಟ್ಯ, ಕಥಕ್, ಕೊಂಕಣಿ ಶೈಲಿಯ ಡ್ಯಾನ್ಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ಪರಿಣತಿ ಹೊಂದಿದೆ. ಈ ಎಲ್ಲಾ ನೃತ್ಯ ಪ್ರಕಾರಗಳಲ್ಲೂ ತರಬೇತಿ ನೀಡಲಾಗುತ್ತಿದೆ.
ಒತ್ತಡ ಹೇರಬಾರದು:
ಡ್ಯಾನ್ಸ್ ಕಲಿಯಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರಬಾರದು. ಮಕ್ಕಳಿಗೆ ಡ್ಯಾನ್ಸ್ ಕಲಿಯಬೇಕು ಎಂಬ ಉತ್ಸಾಹ ಬರಬೇಕು. ಆಗ ಮಾತ್ರ ಅವರು ಆಸಕ್ತಿಯಿಂದ ಕಲಿಯಲು, ಪಳಗಲು ಸಾಧ್ಯ.
– ಪ್ರಮೋದ್ ಆಳ್ವ, ನೃತ್ಯ ನಿರ್ದೇಶಕ
(ಈ ಲೇಖನ ವಿಜಯವಾಣಿಯಲ್ಲಿ ಪ್ರಕಟವಾಗಿದೆ)
ಕುಡ್ಲ, ಕೋರಿ-ರೊಟ್ಟಿ ಮತ್ತು ಮಲಾನಿ!
Posted December 23, 2012
on:ಹುಟ್ಟೂರಿನ ಮೇಲಿನ ಅಭಿಮಾನವೆಂದರೆ ಹಾಗಿರುತ್ತದೆ. ಎಲ್ಲೇ ಎಷ್ಟೇ ದೂರ ಹೋದರೂ, ಮಂಗಳೂರು ಎಂದಾಗ ಒಳಗೊಳಗೆ ಆಗುವ ಸಂಭ್ರಮವೇ ಬೇರೆ. ನನ್ನೂರು, ನಾನು ತಿರುಗಾಡಿದ ರಸ್ತೆಗಳು, ಅದೇ ಹಂಪನಕಟ್ಟೆ ಸಿಗ್ನಲ್, ಸ್ಟೇಟ್ ಬ್ಯಾಂಕಿನ ಮೀನು ಮಾರುಕಟ್ಟೆ, ಲೇಡಿಗೋಷನ್ ಗಲ್ಲಿ, ಸೆಂಟ್ರಲ್ ಮಾರ್ಕೆಟ್, ಪಣಂಬೂರು ಬೀಚ್ ಹೀಗೆ.. ಇಲ್ಲಿದ್ದಾಗ ಇಷ್ಟವಿಲ್ಲದ ಜಾಗಗಳೂ ಎಲ್ಲೋ ಹೋದಾಗ ಕಾಡಲಾರಂಭಿಸುತ್ತವೆ, ಇಷ್ಟವಾಗುತ್ತವೆ.
ಹೆಸರು ಸಂದೀಪ್ ಮಲಾನಿ. ಮುಂಬೈಯಲ್ಲಿ ಹುಟ್ಟಿ ಮಂಗಳೂರಿನಲ್ಲಿ ಆಡಿ ಬೆಳೆದು ಮುಂಬೈ ಸೇರಿಕೊಂಡವರು. ಬಾಲಿವುಡ್, ಕಿರುಚಿತ್ರ ನಿರ್ದೇಶಕನಾಗಿ ದೊಡ್ಡ ಹೆಸರು ಮಾಡಿದ್ದಾರೆ. ಆದರೂ ಕುಡ್ಲದ ಮೋಹ ಬಿಟ್ಟಿಲ್ಲ. ಊರಲ್ಲಿ ಯಾರದೋ ಮದುವೆಯಿದೆ ಎಂದಾಗ, ಅದೇ ಒಂದು ನೆಪವೆಂಬಂತೆ ಮಂಗಳೂರಿಗೆ ಓಡೋಡಿ ಬರುತ್ತಾರೆ. ಎಲ್ಲವನ್ನೂ ಮರೆತು ಕರಾವಳಿಯ ಅಂಗಳದಲ್ಲಿ ಕುಂಟೆಬಿಲ್ಲೆ ಆಡಿ ಮತ್ತೆ ವ್ಯಾಪಾರದ ನಗರಿಗೆ ಮರಳುತ್ತಾರೆ. ಹಾಗೆ ಹೋದವರು ಆಗಾಗ ಅಮ್ಮನಲ್ಲಿ ಹೇಳುವುದು ಇಷ್ಟೇ-ಯಾವುದಾದರೂ ಕಾರ್ಯಕ್ರಮ ಇದ್ದರೆ ಪ್ಲೀಸ್ ಹೇಳಿ.
ಮಲಾನಿ ಹೆತ್ತವರು ಅತ್ತಾವರದಲ್ಲಿ ನೆಲೆಸಿದ್ದಾರೆ. ಇಲ್ಲಿಗೆ ಆಗಾಗ ಬರುವ ಮಲಾನಿ, ಮನಸೋ ಇಚ್ಛೆ ಮಂಗಳೂರು ಸುತ್ತುತ್ತಾರೆ. ಗೆಳೆಯರು, ಪಾರ್ಟಿ ಜತೆಗೆ ಕುಡ್ಲವನ್ನೇ ಅರೆದು ಕುಡಿದು ಬಿಡುತ್ತಾರೆ. ಇವರಿಗಂತೂ ಖುಷಿಯೋ ಖುಷಿ. ಎಷ್ಟಾದರೂ ಇದು ನನ್ನ ಊರಲ್ಲವೇ? ಇದು ನನ್ನದೇ ಭಾಷೆಯಲ್ಲವೇ ಎಂದು ಪ್ರಶ್ನಿಸುತ್ತಾರೆ ಮಲಾನಿ. ಇವರ ಮಾತಿನಲ್ಲಿ ಮಂಗಳೂರಿನ ಟಿಪಿಕಲ್ ಶೈಲಿ ಇನ್ನೂ ಮಾಯವಾಗಿಲ್ಲ ಅನ್ನೋದು ಎದ್ದು ಕಾಣುತ್ತದೆ.
ಶ್ರೀದೇವಿ ಅಂದ್ರೆ ಪ್ರಾಣ:
ಮಲಾನಿಗೆ ಅದ್ಯಾಕೋ ಏನೋ ಗೊತ್ತಿಲ್ಲ. ಶ್ರೀದೇವಿ ಬಂದು ಕೇಳಿದರೆ ಪ್ರಾಣ ಕೊಡಲೂ ಸಿದ್ಧ. ಭೇಟಿಗಾಗಿ ತಪಸ್ಸಿನಂತೆ ಕಾದವರಿಗೆ ಕೆಲ ತಿಂಗಳ ಹಿಂದಷ್ಟೇ ಶ್ರೀದೇವಿ ಸಿಕ್ಕಿದ್ದಾರೆ. ಅವರ ಜತೆಗೇ ಕೂತು ‘ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾ ನೋಡಿರುವ ಮಲಾನಿ ಈಗ ಶ್ರೀದೇವಿ ಬಗ್ಗೆ ಡಾಕ್ಯುಮೆಂಟರಿ ಮಾಡುವ ಸಿದ್ಧತೆಯಲ್ಲಿದ್ದಾರೆ. ಶ್ರೀದೇವಿಯ ಬಾಲ್ಯದಿಂದ ಈಗಿನವರೆಗಿನ ಎಲ್ಲ ಬೆಳವಣಿಗೆಗಳನ್ನು ದಾಖಲಿಸುವ ಯತ್ನ ಇವರದ್ದು.
ಸಾಮಾಜಿಕ ಕಳಕಳಿ:
ಮೊದಲ ಚಿತ್ರ ‘ಮಿಸ್ ಕ್ಯಾಲಿಫೋರ್ನಿಯಾ’. ನಂತರ ‘ಎಸ್ಎಂಎಸ್ 6260’. ಈಗ ‘ಜಾನ್ಲೇವಾ 555’. ಕಿರುಚಿತ್ರಗಳ ಸಾಲಿನಲ್ಲಿ ಜೋ ಜೋ ಲಾಲಿ, ಎಲ್ಲಾ ಓಕೆ ಲೋನ್ ಯಾಕೆ?, ಶಾಯದ್….ಹೀಗೆ ನಿರ್ದೇಶಿಸಿದ ಚಿತ್ರಗಳು ಸಾಮಾಜಿಕ ಕಳಕಳಿಯುಳ್ಳದ್ದು. ಇಷ್ಟೂ ಚಿತ್ರಗಳಲ್ಲಿ ಮಲಾನಿ ಕಮರ್ಷಿಯಲ್ ಆಗಿ ನಗುವಂತಾಗಿದ್ದು ‘ಜಾನ್ಲೇವಾ 555’ ಚಿತ್ರದಲ್ಲಿ. ಇದು ಇತ್ತೀಚೆಗಷ್ಟೇ ಮುಂಬೈಯಲ್ಲಿ 50 ದಿನ ಪೂರೈಸಿದೆ. ಕೆಲವು ಚಿತ್ರಗಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿವೆ. ಹಲವಾರು ಪ್ರಶಸ್ತಿಗಳು ಮಲಾನಿ ಮುಡಿಗೇರಿವೆ.
ಆಧುನಿಕತೆ, ಏಡ್ಸ್, ಸಾಲ, ಸಲಿಂಗಕಾಮ ಮುಂತಾದ ವಿಷಯಗಳಲ್ಲಿ ಸಿನಿಮಾ ಮಾಡಿರುವ ಇವರೀಗ ಕ್ಯಾನ್ಸರ್ ಮತ್ತು ಭ್ರೂಣಹತ್ಯೆಯನ್ನು ರೀಲ್ಗಿಳಿಸುತ್ತಿದ್ದಾರೆ. ಕನ್ನಡದಲ್ಲೂ ಚಿತ್ರ ನಿರ್ದೇಶಿಸುವ ಮಾತುಕತೆ ನಡೆಯುತ್ತಿದೆ. ಆದರೆ ಅದು ಇನ್ನಷ್ಟೇ ಅಂತಿಮವಾಗಬೇಕಿದೆ ಎನ್ನುತ್ತಾರೆ ಮಲಾನಿ. ಇದರ ನಡುವೆ ‘ಸಿನೆಮಲಾನಿ 100’ ಎಂಬ ಕನಸು ಮಲಾನಿ ಕೈಯಲ್ಲಿ ಅಂತಿಮ ರೂಪ ಪಡೆಯುತ್ತಿದೆ. ಭಾರತೀಯ ಚಿತ್ರರಂಗದ 100 ವರ್ಷಗಳ ಇತಿಹಾಸ ಸಾರುವ ಪ್ರಾಜೆಕ್ಟ್ ಶೀಘ್ರದಲ್ಲೇ ಎಲ್ಲರ ಮುಂದೆ ಬರುವ ನಿರೀಕ್ಷೆಗಳಿವೆ.
ತುಳು ಸಿನಿಮಾದ ಕನಸು:
ಬಂಗಾರ್ ಪಟ್ಲೇರ್, ಸೆಪ್ಟೆಂಬರ್ 8 ಮುಂತಾದ ತುಳು, ಕೊಂಕಣಿ ಚಿತ್ರಗಳಲ್ಲಿ ನಟಿಸಿದ್ದೇನೆ. ನನ್ನ ಭಾಷೆಯಲ್ಲಿ (ತುಳು-ಕೊಂಕಣಿ) ಚಿತ್ರ ನಿರ್ದೇಶಿಸಬೇಕು ಎನ್ನುವುದು ಕನಸು. ಕಥೆ ಸಿದ್ಧವಾಗಿದೆ, ನಿರ್ಮಾಪಕರು ಸಿಗುತ್ತಿಲ್ಲ.
ಮಲಾನಿ ಇಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ, ಸ್ಟಾರುಗಳ ಚಿತ್ರ ನಿರ್ದೇಶಿಸಿಲ್ಲವಲ್ಲ? ಇದಕ್ಕೆ ಉತ್ತರವೂ ಸಿದ್ಧ. ಹೊಸಬರಿಗೆ ಅವಕಾಶ ಕೊಡಬೇಕು ಎನ್ನುವುದು ನನ್ನ ಉದ್ದೇಶ; ಎಷ್ಟೋ ಮಂದಿ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಯಾರೂ ಚಾನ್ಸ್ ಕೊಟ್ಟಿರುವುದಿಲ್ಲ. ಅಂಥವರನ್ನು ಪ್ರೋತ್ಸಾಹಿಸೋಣ. ಈಗ ನನ್ನ ಹೊಸ ಪ್ರಾಜೆಕ್ಟ್ ‘ಸಿನೆಮಲಾನಿ’ಯಲ್ಲಿ 500ಕ್ಕೂ ಹೆಚ್ಚು ಕಲಾವಿದರಿದ್ದಾರೆ. ಹಾಗೆಂದು ನಾನು ಸ್ಟಾರ್ಗಳ ಸಿನಿಮಾ ಮಾಡುವುದಿಲ್ಲ ಎಂದಲ್ಲ. ನೋಡೋಣ ಎನ್ನುತ್ತಾರೆ.
ಬನ್ಸ್, ಗೋಳಿಬಜೆ:
ಮಂಗಳೂರು ನನ್ನ ಪ್ರಾಣ. ಅಲ್ಲಿ ಸಿಗುವ ಊಟ, ತಿಂಡಿ ಬೇರೆಲ್ಲೂ ಸಿಗುವುದಿಲ್ಲ. ಅದರಲ್ಲೂ ಕೋರಿ ರೊಟ್ಟಿ, ಚಿಕನ್ ಸುಕ್ಕಾ, ಮೀನು ಅಂದರೆ ನನಗೆ ತುಂಬಾ ಇಷ್ಟ. ಬನ್ಸ್, ಗೋಳಿಬಜೆಯನ್ನಂತೂ ಮಿಸ್ ಮಾಡೋದೇ ಇಲ್ಲ.
– ಸಂದೀಪ್ ಮಲಾನಿ, ನಿರ್ದೇಶಕ
(ಈ ಲೇಖನ ವಿಜಯವಾಣಿಯಲ್ಲಿ ಪ್ರಕಟವಾಗಿದೆ)
ಕಲೆ ಶಿಲೆಯಂತೆ, ಅಳಿವಿಲ್ಲ..!
Posted December 23, 2012
on:ತಂತ್ರಜ್ಞಾನ ಬಳಕೆಯಾದರೂ ಸಾಂಪ್ರದಾಯಿಕ ಕಲೆಗೆ ಧಕ್ಕೆಯಿಲ್ಲ. ಆಧುನಿಕತೆಯ ಭರಾಟೆಯಲ್ಲಿ ನೈಜಕಲೆ ಅಪ್ರಸ್ತುತವೆನಿಸುವ ಪ್ರಸಂಗ ಎಂದೂ ಬರುವುದಿಲ್ಲ. ಅದು ಯಾವತ್ತಿದ್ದರೂ ನವನವೀನ. ಕಾರಣ, ಕುಂಚ ಕೊಡುವ ತೃಪ್ತಿಯನ್ನು ಕಂಪ್ಯೂಟರ್ ಕೊಡದೇ ಇರುವುದು. ಎಷ್ಟೇ ಸುಂದರವಾಗಿ ಚಿತ್ರ ಮೂಡಿಸುವ ತಂತ್ರಜ್ಞಾನವಿದ್ದರೂ, ನೈಜಕಲೆಯಿಂದ ಸಿಗುವ ತೃಪ್ತಿ, ಪಂಚೇಂದ್ರಿಯಗಳಿಗೆ ಆಗುವ ಅನುಭವ ಬೇರೆಲ್ಲೂ ಸಿಗದು. ಸಾಂಪ್ರದಾಯಿಕ ಕಲೆ ಯಾವತ್ತಿದ್ದರೂ ಶಾಶ್ವತ!
ಹೀಗೆ ಹೇಳುವವರು, ಕಲೆಯನ್ನೇ ಉಸಿರಾಡುವ ಪಿ.ಎಲ್. ಸುನಿಲ್ ಅಬ್ರಹಾಂ. ಇವರದ್ದು ವೈಚಾರಿಕ ಮನಸ್ಸು, ಸಾಂಪ್ರದಾಯಿಕ ಕಲ್ಪನೆ, ಸಾಮಾಜಿಕ ಉದ್ದೇಶದ ಕಲಾಸೇವೆ. ಸಂಸ್ಕೃತಿಯನ್ನು ಬಿಂಬಿಸುತ್ತಲೇ ಸಮಾಜದಲ್ಲಿ ಬದಲಾವಣೆ ತರುವ ಪರೋಕ್ಷ ಕೆಲಸ ಇವರಿಂದ ಆಗುತ್ತಿದೆ. ಇವರ ಕಲಾಕೃತಿಗಳನ್ನು ದಿವಿನಾಗಿ ನೋಡಿದ ಮೇಲಂತೂ ಎಲ್ಲ ಸೋಗಿನ ಪೋಷಾಕುಗಳನ್ನು ಕಳಚಿ ಪ್ರಕೃತಿಯ ಮಡಿಲಲ್ಲೇ ಉಳಿದು ಬಿಡೋಣ ಎಂಬ ಭಾವನೆ ಒಳಗೊಳಗೆ ಸ್ಫುರಿಸಿ ಬಿಡುತ್ತದೆ. ಇವರ ಚಿತ್ರಗಳಲ್ಲಿ ಕ್ರಾಂತಿಯ ಆಡಂಬರವಿಲ್ಲ, ಆದರೆ ಸಮಕಾಲೀನ ಚಿತ್ರಣವಿದೆ; ಈ ಸಮಾಜ ಹೇಗಿರಬೇಕೆಂಬ ಮೌನ ಸಂದೇಶವಿದೆ. ಬಣ್ಣಗಳ ನಡುವೆ ಇವರಿಡುವ ಪ್ರತಿ ಚುಕ್ಕಿಗೂ ಕಲಾರಸಿಕ ಒಂದೊಂದು ಅರ್ಥ ಕಲ್ಪಿಸಿಕೊಳ್ಳುವಂತಿರುತ್ತದೆ.
ಮೂಲತಃ ಕೇರಳದ ಕೊಟ್ಟಾಯಂನ ಸುನಿಲ್ ಅಬ್ರಹಾಂ ಆಡುತ್ತಾ ಬೆಳೆದದ್ದು ಶಿವಮೊಗ್ಗೆಯ ಮಂಡಗದ್ದೆಯಲ್ಲಿ. ಅದೇ ಸ್ಫೂರ್ತಿಯೇನೋ, ಕಲಾಕೃತಿಗಳಲ್ಲಿ ಹಚ್ಚ ಹಸುರೇ ಮೇಳೈಸುತ್ತಿದೆ. ಕರಾವಳಿ ಪರಿಸರದ ಸೂಕ್ಷ್ಮಗಳನ್ನು ಅದೆಷ್ಟು ಚೆನ್ನಾಗಿ ಗುರುತಿಸಿ ಚಿತ್ರಿಸಿದ್ದಾರೆಂಬುದನ್ನು ಕಣ್ಣಾರೆ ಕಂಡೇ ಅನುಭವಿಸಬೇಕು. ಇವರ ಕುಂಚದಲ್ಲಿ ಅರಳಿದ ಚಿತ್ರ ನೋಡಿದ ಮೇಲೆ ಸೋಮೇಶ್ವರ ಬೀಚ್ ನೋಡಲೇಬೇಕು ಎಂದೆನಿಸುತ್ತದೆ.
1985ರಲ್ಲಿ ಲಲಿತಕಲೆಯಲ್ಲಿ ಡಿಪ್ಲೊಮಾ ಮುಗಿಸಿದ ಇವರು ನಂತರ ಚಿತ್ರಕಲೆಯನ್ನೇ ವೃತ್ತಿಯಾಗಿ ಸ್ವೀಕರಿಸಿ ಮಂಗಳೂರಿನ ಕರಂಗಲ್ಪಾಡಿಯಲ್ಲಿ ‘ಕಲಾ ವಿಷನ್’ ಸಂಸ್ಥೆ ನಡೆಸುತ್ತಿದ್ದಾರೆ. ಈ ಕಲಾಸಂತೆಯ ಸಂಸ್ಥೆಗೀಗ 10ರ ಸಂಭ್ರಮ. ಇಷ್ಟರಲ್ಲೇ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಅದರಲ್ಲೂ ನಾಲ್ಕರಿಂದ 80ರ ವಯೋಮಾನದ ಕಲಾಸಕ್ತರಿಗೆ ಗುರುವಾಗಿರುವ ಹೆಮ್ಮೆ ಸುನಿಲ್ ಅವರದ್ದು.
ಇವರ ಪಾಲಿಗೆ ಕಲೆ ಎನ್ನುವುದು ಪ್ರವೃತ್ತಿ ಮತ್ತು ವೃತ್ತಿ ಎರಡೂ ಹೌದು. ಕಲೆಯಲ್ಲಿ ಸಿಗುವ ತೃಪ್ತಿಯನ್ನೇ ಬದುಕು ಎಂದು ನಂಬಿ ಸೋತಿಲ್ಲ. ಕಲೆಯ ಪಾಠ ಹೇಳುತ್ತಲೇ ಅದ್ಭುತ ಕಲ್ಪನೆಗಳನ್ನು ಕಣ್ಣ ಮುಂದೆ ತಂದುಕೊಂಡು ಸರಸರನೆ ಸಿಕ್ಕು ಸಿಕ್ಕೆನಿಸುವ ಗೆರೆಯೆಳೆದು ಬಣ್ಣ ತುಂಬಿ ಸುಂದರ ಕಲಾಕೃತಿಗಳಿಗೆ ಜೀವ ಕೊಟ್ಟಿದ್ದಾರೆ. ತೈಲವರ್ಣ, ಜಲವರ್ಣ, ಅಕ್ರಿಲಿಕ್, ಸೆರಾಮಿಕ್ಸ್, ಮುರಾಲ್ ಪೇಂಟಿಂಗ್, ಉಬ್ಬು ಶಿಲ್ಪ, ಸೆರಾಮಿಕ್ಸ್ ಪೇಂಟಿಂಗ್, ಕೊಲಾಜ್, ಕ್ಯಾರಿಕೇಚರ್ ಹೀಗೆ ಎಲ್ಲದರಲ್ಲೂ ಸುನಿಲ್ ಕೈಯೋಡಿದೆ. ಸಾಕಷ್ಟು ಕಡೆ ಕಲಾ ಪ್ರದರ್ಶನಗಳನ್ನೂ ಏರ್ಪಡಿಸಿದ್ದಾರೆ.
ಹೆಮ್ಮೆ ಸಾಕು, ಪ್ರಶಸ್ತಿ ಬೇಡ:
ಏನೂ ಮಾಡದವರಿಗೆ ಪ್ರಶಸ್ತಿಗಳು ಒಲಿಯುತ್ತವೆ. ಆದರೆ ನಾನು ಪ್ರಶಸ್ತಿಯ ಹಿಂದೆ ಬಿದ್ದಿಲ್ಲ. ಯಾವ ದೊಡ್ಡ ಕಿರೀಟವೂ ಮುಡಿಗೇರಿಲ್ಲ. ಆ ನಿರೀಕ್ಷೆಯೂ ನನಗಿಲ್ಲ ಎನ್ನುವ ಸುನಿಲ್, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಳ, ಶಕ್ತಿನಗರದಲ್ಲಿರುವ ಕೊಂಕಣಿ ಸಭಾಭವನ ಕಟ್ಟಡಗಳು ಸೇರಿದಂತೆ ಅನೇಕ ಸುಂದರ ಕಟ್ಟಡಗಳ, ಗಾರ್ಡನ್ಗಳಿಗೆ ಇಂಜಿನಿಯರುಗಳು ಹಾಕಿದ್ದ ಲೆಕ್ಕಾಚಾರಗಳಿಗೆ ಕಲ್ಪನೆಯ ರೂಪ ಕೊಟ್ಟಿರುವುದನ್ನು, ಕೊಡುತ್ತಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 1992ರಲ್ಲಿ ಆರಂಭವಾದ ಕರಾವಳಿ ಉತ್ಸವದ ಲಾಂಛನ ಸ್ಪರ್ಧೆಯಲ್ಲಿ ಗೆದ್ದಿದ್ದೇನೆ, ಅದೇ ಲಾಂಛನ ಈಗಲೂ ಇದೆ ಎಂದು ಭುಜ ಹಾರಿಸುತ್ತಾರೆ.
ಇನ್ನು ಜಾಗತೀಕರಣದಿಂದ ಕಲೆಗೆ ಲಾಭವಾಗಿದೆ ಎನ್ನುತ್ತಾರೆ ಸುನಿಲ್. ಇತ್ತೀಚಿನ ವರ್ಷಗಳಲ್ಲಿ ಕಲೆಯತ್ತ ಆಕರ್ಷಿತರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ವಿದೇಶಗಳಲ್ಲಿ ಕಲೆಗಿರುವ ಮಹತ್ವವನ್ನು ಕಣ್ಣಾರೆ ಕಂಡವರು, ಇಲ್ಲಿ ಬಂದು ತಾವೂ ಕುಂಚ ಕೈಗೆತ್ತಿಕೊಂಡು ತಮ್ಮ ಕಲ್ಪನೆಯನ್ನು, ಮನಸ್ಸಿನ ಭಾವನೆಗಳನ್ನು ಅಚ್ಚಿಗೆ ಹಾಕುತ್ತಾರೆ. ಹಾಗೆ ನೋಡಿದರೆ, ಕಲೆಗೆ ಭಾರತದಷ್ಟು ಬೇರೆ ಪ್ರಶಸ್ತ ಸ್ಥಳ ಬೇರೊಂದಿಲ್ಲ. ಭಾರತೀಯರಲ್ಲಿ ಕಲೆ ಎನ್ನುವುದು ರಕ್ತಗತವಾಗಿಯೇ ಬಂದಿದೆ ಎಂದು ‘ಕಲಾ ವಿಷನ್’ ವಿದ್ಯಾರ್ಥಿಗಳತ್ತ ಬೊಟ್ಟು ಮಾಡಿ ತೋರಿಸುತ್ತಾರೆ.
ನಾಟಾ ತರಬೇತಿ:
ಸುನಿಲ್ ಅಬ್ರಹಾಂ ಕಲಾದೇವಿಯ ಆರಾಧನೆ ಜತೆಗೆ ಶಿಕ್ಷಣಕ್ಕೆ ಸಂಬಂಧಪಟ್ಟ ತರಬೇತಿಗಳನ್ನೂ ನೀಡುತ್ತಿದ್ದಾರೆ. ರಾಷ್ಟ್ರೀಯ ವಾಸ್ತುಶಿಲ್ಪ ಮಂಡಳಿ ನಡೆಸುವ ನಾಟಾ(ನ್ಯಾಷನಲ್ ಅಪ್ಟಿಟ್ಯುಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ಪರೀಕ್ಷೆಗಾಗಿ ಮಂಗಳೂರಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆರು ತಿಂಗಳ ಅವಧಿಯ ತರಬೇತಿ ಇವರ ‘ಕಲಾ ವಿಷನ್’ನಲ್ಲಿ ನಡೆಯುತ್ತಿದೆ.
ಸಿಇಟಿ ಇದ್ದಂತೆ ವಾಸ್ತುಶಿಲ್ಪ ಇಂಜಿನಿಯರಿಂಗ್ ಕೋರ್ಸ್ಗಳಿಗೆ ನಾಟಾ ಪರೀಕ್ಷೆ ಕಡ್ಡಾಯ. ಆದರೆ ಇದು ಸಿಇಟಿಯಂತೆ ಸಾಮಾನ್ಯ ರೂಪದಲ್ಲಿ ಇರುವುದಿಲ್ಲ. ಭವಿಷ್ಯದ ಇಂಜಿನಿಯರುಗಳು ಕುಂಚದ ಕಲೆ ಕಲಿಯಲೇಬೇಕು. ಹಾಗಾಗಿ ಆರ್ಕಿಟೆಕ್ಚರ್ ಕ್ಷೇತ್ರವನ್ನು ಆರಿಸಿಕೊಳ್ಳುವ ಉದ್ದೇಶ ಹೊಂದಿರುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಆರಂಭದಲ್ಲೇ ನಾಟಾಕ್ಕಾಗಿ ತರಬೇತಿ ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲೂ ಸುನಿಲ್ ಮುಂದಡಿಯಿಟ್ಟಿದ್ದಾರೆ.
(ಈ ಲೇಖನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)
ಪುರಾತನದ ಕುಕ್ಕುಟಪುರ, ಈಗಿನ ಕೊಕ್ಕಡದಲ್ಲಿ ನೆಲೆಸಿರುವ ಹತ್ತು ಗ್ರಾಮಗಳ ಗ್ರಾಮದೇವತೆ ಶ್ರೀ ವೈದ್ಯನಾಥೇಶ್ವರ ಸಕಲ ರೋಗ ರುಜಿನಗಳಿಗೆ ವೈದ್ಯನೆಂಬುದು ಪ್ರತೀತಿ.
ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ದ್ವಾಪರ ಯುಗದ ಉದ್ಭವ ಲಿಂಗದ ದರ್ಶನ ಪಾಂಡವರಿಗೆ ಆಗಿತ್ತು ಎಂಬಲ್ಲಿಂದ, ಸ್ವತಃ ಪಾಂಡವರಿಗೇ ವೈದ್ಯನಾಥೇಶ್ವರ ಔಷಧಿ ಕೊಟ್ಟಿದ್ದ; ಇಲ್ಲಿರುವ ಕಲ್ಯಾಣಿಯನ್ನು ಸ್ವತಃ ಭೀಮನೇ ನಿರ್ಮಿಸಿದ್ದ ಎಂಬ ಐತಿಹ್ಯವಿದೆ.
ಶಿಶಿಲೇಶ್ವರನ ತಲೆಗೆ ಗಾಯವಾಗಿದ್ದಾಗ ಇದೇ ವೈದ್ಯನಾಥೇಶ್ವರ ಮದ್ದು ಕೊಟ್ಟು ಗುಣಪಡಿಸಿದ್ದ. ಆಗ ಉಂಟಾದ ಗೊಂದಲದಲ್ಲಿ ಶಿಶಿಲೇಶ್ವರ ಶಾಪ ಕೊಟ್ಟಿದ್ದರಿಂದಲೇ ಇಂದಿಗೂ ಕ್ಷೇತ್ರದ ಕಲ್ಯಾಣಿಯ ಮೀನುಗಳು ಚಿಕ್ಕದಾಗಿವೆ ಎಂದು ಇಲ್ಲಿನ ಪುರಾಣ ಹೇಳುತ್ತದೆ.
ಕ್ಷೇತ್ರದ ಕೆರೆಯಲ್ಲಿ ಮಿಂದವರ ಕುಷ್ಠರೋಗವೂ ವಾಸಿಯಾಗಿದೆ. ಯಾವುದೇ ಕಾಯಿಲೆಯಿದ್ದರೂ, ತೀರ್ಥ ಚಿಮುಕಿಸಿದಲ್ಲಿ ಗುಣಮುಖವಾಗುತ್ತದೆ. ಜಾನುವಾರುಗಳ ಸಮಸ್ಯೆಗೂ ಇಲ್ಲಿ ಪರಿಹಾರ ಸಿಗುತ್ತದೆ ಎನ್ನುವುದು ಊರ-ಪರವೂರ ಭಕ್ತರ ನಂಬಿಕೆ.
ಇಲ್ಲಿನ ಧ್ವಜಸ್ತಂಭ ಮತ್ತು ಕೆರೆಯ ನಡುವಿನ ನೀಲಕಂಠ ಲಿಂಗವನ್ನು ನರಸಿಂಹ ದೇವರಾಯನೆಂಬ ರಾಜ ಯುದ್ಧ ಗೆದ್ದಾಗ ಪ್ರತಿಷ್ಠಾಪಿಸಿದ್ದ ಎಂಬುದಕ್ಕೆ ಶಾಸನದ ಸಾಕ್ಷಿಯಿದೆ.
ಗರ್ಭಗುಡಿ ಎಡಭಾಗದಲ್ಲಿ ಗಣಪತಿ, ಬಲಭಾಗದಲ್ಲಿ ಉಳ್ಳಾಲ್ತಿ. ದೇಗುಲದ ಹೊರಗೆ ಎಡಭಾಗದಲ್ಲಿ ವಿಷ್ಣುಮೂರ್ತಿ ಗುಡಿ. ಕಲ್ಯಾಣಿಯ ಪಕ್ಕದಲ್ಲೇ ಅಣ್ಣಪ್ಪನ ಕಟ್ಟೆ. ದೇಗುಲದ ಎದುರಿನಲ್ಲಿ ನಿಜ ಬನದೊಳಗೆ ನಾಗಬನ ವಿಶೇಷ. ರಂಗಪೂಜೆ ಮತ್ತು ಏಕಾದಶರುದ್ರ ಇಲ್ಲಿನ ವಿಶೇಷ ಸೇವೆಗಳು.
ಅಣ್ಣಪ್ಪ ಗುಡಿ:
ಕೈಲಾಸದಿಂದ ವೈದ್ಯನಾಥೇಶ್ವರನ ಜತೆ ಕೊಕ್ಕಡಕ್ಕೆ ಬಂದು ಧರ್ಮಸ್ಥಳಕ್ಕೆ ಮುನಿಸಿಕೊಂಡು ಹೋಗಿದ್ದ ಅಣ್ಣಪ್ಪ, ಮತ್ತೆ ಬರಬೇಕೆಂದರೆ ಕ್ಷೇತ್ರದಲ್ಲಿ ಅನ್ನದಾನ ನಡೆಯಬೇಕು ಎಂದು ಹೇಳಿದ್ದನಂತೆ. ಅದರಂತೆ ಈಗ ಇಲ್ಲಿ ಭೋಜನ ಶಾಲೆ ಮತ್ತು ಅಣ್ಣಪ್ಪ ಗುಡಿ ನಿರ್ಮಾಣವಾಗುತ್ತಿದೆ.
ನಂದಿ ಭುಜ:
ಭೀಮ ಕೋಪದಿಂದ ಗದೆಯನ್ನು ಬಂಡೆಗೆ ಬಡಿದಾಗ ನಂದಿ ಮೂರು ತುಂಡಾಗಿ ಸಿಡಿದು ಭುಜದ ಭಾಗ ಕೊಕ್ಕಡದಲ್ಲಿ, ಬಾಲದ ಭಾಗ ಶಿಶಿಲದಲ್ಲಿ ಹಾಗೂ ತಲೆಯ ಭಾಗ ರಾಮಕುಂಜದಲ್ಲಿ ಹೋಗಿ ಬಿದ್ದಿತ್ತು. ಇದರ ಕುರುಹು ಎಂಬಂತೆ ನಂದಿಯ ಭುಜದಂತೆ ಕಾಣುವ ಕಲ್ಲು ಗರ್ಭಗುಡಿಯ ಎದುರಲ್ಲೇ ಕಾಣಸಿಗುತ್ತದೆ.
ಡಿ.16ಕ್ಕೆ ಕೋರಿ ಜಾತ್ರೆ:
ಇಲ್ಲಿ ಹರಕೆ ತೀರಿಸಲು ಕೋಣ, ಎತ್ತು, ಹಸು, ಕರುಗಳನ್ನೂ ಕಂಬಳ ಗದ್ದೆಯಲ್ಲಿ ಓಡಿಸುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿ ಹರಕೆ ಹೊತ್ತವರು ಕಂಬಳಕ್ಕೆ ಸೊಪ್ಪು ಹಾಕುತ್ತಾರೆ. ಇದೇ ಕೋರಿ ಜಾತ್ರೆ ವಿಶೇಷ. ಈ ವರ್ಷ ಡಿ.16ರಂದು ಕೋರಿ ಜಾತ್ರೆ. ವಾರ್ಷಿಕ ಜಾತ್ರೆ ಪ್ರತಿವರ್ಷ ಮೇ 2ರಿಂದ 9ರವರೆಗೆ ವಿಜೃಂಭಣೆಯಿಂದ ನಡೆಯುತ್ತದೆ.
ಪರ್ಜನ್ಯ ಜಪ:
ಬರಗಾಲದ ಸಂದರ್ಭದಲ್ಲಿ ಮಧ್ವಾಚಾರ್ಯರು ಕೊಕ್ಕಡಕ್ಕೆ ಬಂದಿದ್ದಾಗ, ಪರ್ಜನ್ಯ ಜಪ ಮಾಡಿದ್ದರು. ಆಗ ಮಳೆಯಾಗಿತ್ತು ಎಂಬ ಪ್ರತೀತಿಯಿದೆ. ಇಲ್ಲಿ ಪರ್ಜನ್ಯ ಜಪ ಮಾಡಿದರೆ ಈಗಲೂ ಮಳೆಯಾಗುತ್ತದೆ.
– ಸತ್ಯನಾರಾಯಣ ಭಟ್, ಆಡಳಿತ ಮೊಕ್ತೇಸರರು
ಭಕ್ತರ ನಂಬಿಕೆ
ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸಿಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಕ್ಷೇತ್ರ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದೆ. ನಿತ್ಯ ಅನ್ನ ಸಂತರ್ಪಣೆಯ ಸಂಕಲ್ಪ ಮಾಡಿದ್ದೇವೆ.
– ಹರೀಶ್ ಭಟ್, ಭಕ್ತರು
(ಈ ಲೇಖನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)
ಆ ಒಂದು ಕ್ಷಣ ಇಲ್ಲದೇ ಇರುತ್ತಿದ್ದರೆ…
Posted March 20, 2012
on:ಜೀವನ ಯಾರೋ ಬರೆದ ಗ್ರಂಥವಲ್ಲ, ಒಪ್ಪ-ಓರಣವಾಗಿ ಜೋಡಿಸಿಟ್ಟ ಲೈಬ್ರೆರಿಯೂ ಅಲ್ಲ. ಯಾವ ಕ್ಷಣದಲ್ಲಿ, ಏನು ಬೇಕಾದರೂ ನಡೆಯಬಹುದು, ನಡೆಯದೇ ಇರಲೂ ಬಹುದು. ನಡೆದರೆ ಅನುಭವ, ನಡೆಯದಿದ್ದರೆ ನಿರ್ವಿಕಾರ.
ಬರೀ ಅದರಿಂದಾಗಿ ಹೀಗೆಲ್ಲಾ ನಡೆಯಿತು. ಆ ಒಂದು ಕ್ಷಣ ನನ್ನ ಬದುಕಲ್ಲಿ ಬರದೇ ಹೋಗಿದ್ದಿದ್ದರೆ..? ಹೀಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ಸಲ ಯೋಚನೆ ಮಾಡಿಯೇ ಇರುತ್ತೀರಿ. ಅಂತಹದ್ದೊಂದು ಆಕಸ್ಮಿಕ, ಆಘಾತಕಾರಿ ಕ್ಷಣ ನಿಮ್ಮನ್ನೂ ಬಾಧಿಸಿರುತ್ತದೆ.
ನಿಮ್ಮ ಪಾಲಿಗೆ ಅದೊಂದು ಕೆಟ್ಟ ಕ್ಷಣ. ಯಾರ ಮೇಲೂ ಆರೋಪ ಹೊರಿಸಲಾಗದ ಸ್ವಯಂಕತಾಪರಾಧಗಳ ಎಫ್ಐಆರ್. ಯಾರ ಮೇಲಾದರೂ ಆರೋಪ ಹೊರಿಸೋಣವೆಂದರೆ ಕಣ್ಣೆದುರು ನಿಮ್ಮದೇ ಚಿತ್ರ ಬಂದು ಬಿಡುತ್ತದೆ. ಬೇರೆ ಯಾರೂ ಮಾಡಿರದ ತಪ್ಪಿಗಾಗಿ ನಿಮ್ಮನ್ನೇ ನೀವು ಶಪಿಸಬೇಕಾಗುತ್ತದೆ.
ಯಾಕೆ ಹೀಗೆ? ಇದಕ್ಕೆಲ್ಲ ಏನು ಕಾರಣ? ಅಂತಹದ್ದೊಂದು ನಮ್ಮದಲ್ಲದ ಅನಿರೀಕ್ಷಿತ ಕ್ಷಣ ಬದುಕಿನ ಬಂಡಿಯನ್ನು ಹೀಗೆ ಅಲುಗಾಡಿಸಿದ್ದಾದರೂ ಏತಕ್ಕೆ? ಅದೊಂದು ಕ್ಷಣ ಬರದೇ ಇದ್ದಿದ್ದರೆ, ಆ ಆಕಸ್ಮಿಕವೊಂದು ನಡೆಯದೇ ಇರುತ್ತಿದ್ದರೆ ಇಂದು ಎಷ್ಟು ಚೆನ್ನಾಗಿರುತ್ತಿತ್ತು, ಅಲ್ವೇ? ಹೀಗೆ ಮಂಥಿಸುವಾಗ ಬಗೆಬಗೆಯಲ್ಲಿ ಕಾಡಲು ವಿಷಯಗಳು ಸಿಗುತ್ತವೆ.
ದಾಟಿ ಬಿಟ್ಟರೆ ಸೇಫ್…
ಇಲ್ಲಿ ನಿರ್ದಿಷ್ಟ ವಿಚಾರಗಳನ್ನೇ ಹೇಳಬೇಕಾಗಿಲ್ಲ. ಆದರೆ ಪ್ರತಿಯೊಬ್ಬರೂ ಯಾವುದೋ ಕಾರಣಕ್ಕಾಗಿ ಅನುಭವಿಸಿರುವ ಅಕಾಲಿಕ ವೇದನೆ. ಯಾಕೆ ಹೀಗಾಯ್ತು ಅನ್ನೋದನ್ನು ಯೋಚಿಸುತ್ತಾ ಎಲ್ಲವನ್ನೂ ಮರೆತವರಂತೆ, ಮತ್ತೆ ಮತ್ತೆ ಯೋಚಿಸಿದರೂ ನೆನಪೇ ಆಗದಂತಹ ಸ್ಥಿತಿ.
ಕೆಲವೊಮ್ಮೆ ಕೆಲವರ ಬದುಕಿನಲ್ಲಿ ಇಂತಹ ಆಕಸ್ಮಿಕಗಳೇ ದಿನಚರಿಯಾಗಿ ಬಿಡುತ್ತವೆ. ಆದರೆ ಅವೆಲ್ಲವೂ ಆ ಕ್ಷಣಗಳ ನಂತರದ ರೋದನ. ಅದೊಂದು ಕ್ಷಣದ ಮೊದಲು ಮೊಗ್ಗುಲಾಬಿಯಂತಿದ್ದ ಬದುಕು, ಮರು ಕ್ಷಣವೇ ಅದೇ ಗುಲಾಬಿಯ ಮುಳ್ಳುಗಳಲ್ಲಿ ಸಿಕ್ಕಿ ಹಾಕಿಕೊಂಡಿರುತ್ತದೆ. ಆ ಕ್ಷಣವನ್ನು ಹೇಗೋ ದಾಟಿ ಬಿಟ್ಟಿದ್ದರೆ ನೋವಿನ ಅರಿವೇ ಆಗುತ್ತಿರಲಿಲ್ಲ. ಎಲ್ಲವೂ ಅಷ್ಟು ಸುರಕ್ಷಿತವಾಗಿರುತ್ತಿತ್ತು.
ದುರಂತ ಅಂದ್ರೆ, ಆ ಕ್ಷಣಗಳು ಸುಳಿವೇ ನೀಡದೆ ಬಂದೆರಗುತ್ತವೆ ಅನ್ನೋದು. ಮಗ್ಗುಲಿಗೆ ಬಡಿದು ಯಾವುದೋ ಒಂದು ಭಾಗವನ್ನು ಕಿತ್ತು ತೆಗೆದ ನಂತರವಷ್ಟೇ ನಿಮಗೆ ಅದೇನು ಅನ್ನೋದು ಅರಿವಿಗೆ ಬಂದಿರುತ್ತದೆ. ನೀವಾಗ ಪೂರ್ತಿಯೆಂದರೆ ಪೂರ್ತಿ ಅಸಹಾಯಕರಾಗಿರುತ್ತೀರಿ. ಹಣೆಬರಹವನ್ನು ಹಳಿಯುವುದನ್ನು ಬಿಟ್ಟರೆ ಬೇರೆ ದಾರಿಗಳೂ ನಿಮಗೆ ಉಳಿದಿರುವುದಿಲ್ಲ. ಅದುವರೆಗೂ ಬಾಧಿಸದ ಅಭದ್ರತೆಯ ಭಾವನೆಗಳು, ಇದು ತಮ್ಮ ಸರದಿಯೆಂಬಂತೆ ಕಾಡಲಾರಂಭಿಸುತ್ತವೆ.
ಆತ್ಮೀಯರು ಬೇಕೆನ್ನುವಾಸೆ…
ಅಂತಹ ಕ್ಷಣಗಳನ್ನು ಏಕಾಂಗಿಯಾಗಿ ಅನುಭವಿಸುವುದು ಎಂದರೆ ಸಾವಿನಂಚಿನ ಅನಿರ್ವಚನೀಯ ನೋವಿಗಿಂತಲೂ ಮಿಗಿಲು. ಜಗತ್ತಿನ ತುಂಬೆಲ್ಲ ನನ್ನಷ್ಟು ನೋವುಂಡವರು ಇನ್ಯಾರೂ ಇಲ್ಲ ಎಂಬ ಭಾವನೆಯ ಜನನದ ಕಾಲಘಟ್ಟವೂ ಇದೇ.
ಆ ಸೂತಕದ ಹೊತ್ತಿನಲ್ಲಿ ನಿಮಗೊಬ್ಬ ಆತ್ಮೀಯರೆನಿಸಿಕೊಂಡವರು ನೆನಪಾದರೆ ಬಚಾವ್ ಆದಂತೆ. ಅವರ ನೇವರಿಕೆಯನ್ನು ನೀವು ಬಯಸಿದರೆ ಬದುಕನ್ನು ಗೆಲ್ಲಲು ಹೊರಟಿದ್ದೇನೆ ಎಂದು ಜಗತ್ತಿಗೆ ಸಾರಿಕೊಂಡಂತೆ. ನಿಜಕ್ಕೂ ಆ ವ್ಯಕ್ತಿ ಅಷ್ಟೊಂದು ಆತ್ಮೀಯನಾಗಿದ್ದರೆ ನಿಮ್ಮ ಮನದಲ್ಲಿ ಆವರಿಸಿದ್ದ ಕತ್ತಲೆ ಒಮ್ಮಿಂದೊಮ್ಮೆಲೆ ಸರಿಯಬಹುದು. ಅಷ್ಟಾಗದೇ ಇದ್ದರೂ ಕನಿಷ್ಠ ಬದುಕಿನ ಬಗ್ಗೆ ಒಂದಷ್ಟು ನಿರೀಕ್ಷೆಗಳು ಚಿಗಿತುಕೊಳ್ಳಬಹುದು.
ಮರೆಯಿರಿ, ಮುನ್ನಡೆಯಿರಿ…
ಅದು ಘಟಿಸಲೇಬೇಕಾಗಿತ್ತು, ಘಟಿಸಿದೆ ಎನ್ನುವುದು ಧನಾತ್ಮಕ. ಮುಂದೆ ಮತ್ತೆ ಹೀಗಾಗಬಹುದು ಅನ್ನೋದು ಋಣಾತ್ಮಕ. ಆದರೂ, ಎಚ್ಚರಿಕೆ ವಹಿಸುವುದು ಜಾಣತನ. ನಿಮ್ಮ ಎಚ್ಚರಿಕೆ ಘಟನೆಯನ್ನು ತಡೆಯುತ್ತದೆ ಎಂದೇ ಹೇಳಲಾಗದು. ಆದರೆ ಕನಿಷ್ಠ ನೀವು ಅನಿರೀಕ್ಷಿತತೆಗೆ ತೆರೆದುಕೊಳ್ಳುವುದರಿಂದ ಭಾರೀ ಮಾನಸಿಕ ಆಘಾತ ಅನುಭವಿಸುವುದು ಕಡಿಮೆಯಾಗಬಹುದು.
ತಪ್ಪು ನಿಮ್ಮಿಂದಲೇ ನಡೆದಿರಬಹುದು ಅಥವಾ ಬೇರೆ ಯಾರೇ ಮಾಡಿರಬಹುದು. ಆದರೆ ಅದಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಆ ಕ್ಷಣಗಳಿಗೆ ನಿಮ್ಮದೇ ಕಾರಣಗಳಿರುತ್ತವೆ. ಅದಕ್ಕಾಗಿ ಕೊರಗದಿರಿ, ವಾದವೂ ಬೇಡ; ನಿಮ್ಮಷ್ಟಕ್ಕೆ ನೀವೇ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ. ಅದರ ಖುಷಿಯನ್ನು ಅನುಭವಿಸಿ. ಅದು ಸೋಲಲ್ಲ, ಗೆಲುವಿನ ಆರಂಭ. ಇನ್ನೊಂದು ಸೋಲನ್ನು ಸೋಲಿನ ನಿರೀಕ್ಷೆಯಿಂದಲೇ ಎದುರಿಸಿ ವಾಸ್ತವದಲ್ಲಿ ಗೆಲ್ಲುವ ತಯಾರಿ.
ಹೀಗೂ ಯೋಚಿಸಿ…
* ಘಟಿಸಿ ಹೋದ ಸಂಗತಿಗೆ ವಿಷಾದ ಯಾಕೆ? ಅದು ತಪ್ಪಿರಬಹುದು, ಸರಿಯೇ ಇರಬಹುದು. ಜೀವನದ ಪ್ರತಿ ಪುಟಗಳು ಮತ್ತು ಅನಿರೀಕ್ಷಿತ ತಿರುವುಗಳಿಂದಲೇ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಂಡಿರುತ್ತದೆ.
* ಜೀವನ ಅನ್ನೋದು ಅನಿರೀಕ್ಷಿತ ತಿರುವುಗಳಿಂದಲೇ ತುಂಬಿರುತ್ತದೆ. ಆದರೆ ನಾವು ಎಲ್ಲಿರಬೇಕೋ, ಅದನ್ನು ತಡೆಯಲು ಆ ತಿರುವುಗಳಿಗೆ ಅವಕಾಶ ನೀಡಬೇಡಿ.
* ಜೀವನವನ್ನು ಪ್ರೀತಿಸುವಲ್ಲಿ ವಿಷಾದವೇ ಬೇಡ. ಗೊಂದಲಗಳಿವೆ ಅನ್ನೋವಾಗ ನಕ್ಕು ಬಿಡಿ. ಕಣ್ಣೀರಲ್ಲೂ ಸುಖವಿರಲಿ. ಆಗೋದೆಲ್ಲ ಒಳ್ಳೇದಕ್ಕೆ ಎಂಬುದನ್ನು ಆಗಾಗ ನೆನಪಿಸಿಕೊಳ್ಳಿ.
* ಎಲ್ಲಾ ಕಥೆಗಳಿಗೂ ಅಂತ್ಯ ಇದ್ದೇ ಇರುತ್ತದೆ. ಆದರೆ ಜೀವನದಲ್ಲಿ ಬರೋ ಪ್ರತಿ ಅಂತ್ಯ ಇನ್ನೊಂದು ಆರಂಭದ ಆರಂಭವಷ್ಟೇ.
* ತಪ್ಪುಗಳಿಂದಲೂ ಒಳ್ಳೆಯದಾಗಬಹುದು. ಯಾಕೆಂದರೆ ತಪ್ಪು ಅನ್ನೋದು ಯಾವತ್ತೂ ಅನಿರೀಕ್ಷಿತ ಸಂಗತಿಯಾಗಿರುತ್ತದೆ.
(ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ)
ಪಕ್ಕದ ಮನೆಯ ಸೌಮ್ಯಾ ಈ ಬಾರಿಯೂ ಡಿಸ್ಟಿಂಕ್ಷನ್. ಆಕೆಯ ತಮ್ಮ ಫಸ್ಟ್ ಕ್ಲಾಸು. ನಾನು ಮೊದಲೇ ವೀಕು. ಈ ಬಾರಿ ಪರೀಕ್ಷೆಯಲ್ಲಿ ಎಲ್ಲಾದರೂ ಪಾಸ್ ಆಗದೇ ಇದ್ದರೆ? ಇಲ್ಲ, ಪಾಸ್ ಆಗಲೇಬೇಕು. ಇಲ್ಲದೇ ಇದ್ದರೆ ಓರಗೆಯವರಿಗೆ ಮುಖ ತೋರಿಸಲು ಸಾಧ್ಯವಿಲ್ಲ. ಮನೆಯಲ್ಲಿ ಅಪ್ಪ ಬೈತಾರೆ. ಅಮ್ಮನೂ ಸುಮ್ಮನಿರುವುದಿಲ್ಲ. ನನ್ನದೇ ತರಗತಿಯವರು ಗೇಲಿ ಮಾಡಬಹುದು. ಇಲ್ಲ, ಆ ಅವಮಾನವನ್ನು ಎದುರಿಸಲಾರೆ. ಫೇಲಾದರೆ ನನ್ನ ಜೀವನವೇ ಮುಗಿದು ಹೋದಂತೆ.
ಇಂತಹ ಯೋಚನೆಯೇ? ಪರೀಕ್ಷೆಯಲ್ಲಿ ಫೇಲಾಗುತ್ತೀರಿ ಅನ್ನೋ ಭಯವೇ? ಬಿಡಿ, ನೀವು ಒಂದು ವೇಳೆ ಫೇಲಾದ್ರೂ ಅದು ಜಸ್ಟ್ ಪರೀಕ್ಷೆ ತಾನೇ? ಅದಕ್ಕೆ ಯಾಕೆ ಅಷ್ಟೊಂದು ಚಿಂತೆ ಮಾಡ್ತೀರಾ? ಒಂದು ಪರೀಕ್ಷೆಯಲ್ಲಿ ಆಗದಿದ್ರೆ ಇನ್ನೊಂದು. ಇನ್ನೊಮ್ಮೆ ಬರೀತಿನಿ, ಪಾಸ್ ಆಗೇ ಆಗ್ತೀನಿ ಅಂದ್ಕೊಳ್ಳಿ. ನೆನಪಿಡಿ, ಯಾವತ್ತೂ ಇಷ್ಟಕ್ಕೇ ಜೀವನ ಮುಗಿದು ಹೋಯ್ತು ಅನ್ನೋ ನಿರ್ಧಾರಕ್ಕೆ ಬರಬೇಡಿ.
ಜೀವನದ ಪರೀಕ್ಷೆ ದೊಡ್ಡದು…
ಒಂದು ವೇಳೆ ನೀವು ಪರೀಕ್ಷೆಯಲ್ಲಿ ಫೇಲಾದರೆ, ಅದು ನಿಮ್ಮ ವೈಫಲ್ಯ ಎಂದು ಯಾಕೆ ಅಂದುಕೊಳ್ಳುತ್ತೀರಿ. ಅದು ನಿಮ್ಮ ಪಾಲಕರು, ಶಿಕ್ಷಕರು ಮತ್ತು ಈ ಸಮಾಜದ ವೈಫಲ್ಯವೂ ಆಗಿರಬಹುದಲ್ಲವೇ? ಅಷ್ಟಕ್ಕೂ ನಿಮ್ಮ ಸೋಲು ಇನ್ನೂ ಆರಂಭವೇ ಆಗಿರುವುದಿಲ್ಲ. ಅದಕ್ಕೂ ಮೊದಲಿನ ತಯಾರಿಲ್ಲಷ್ಟೇ ನೀವಿರುತ್ತೀರಿ. ನೀವಿನ್ನೂ ಸ್ಪರ್ಧೆಯತ್ತ ಮುನ್ನುಗ್ಗುತ್ತಿರುತ್ತೀರಿ. ಆಗಲೇ ಸೋಲೊಪ್ಪಿಕೊಳ್ಳುವುದು ಹೇಗೆ ?
ಫಲಿತಾಂಶವೆಂಬ ಒಂದು ಚಿಕ್ಕ ಪದ, ಮೂರು ಗಂಟೆಗಳ ಕಾಲ ಬರೆಯುವ ಚಿಕ್ಕದೊಂದು ಪರೀಕ್ಷೆ ಇದಿಷ್ಟೇ ಜೀವನವೇ? ಅದಕ್ಕಾಗಿ ಜೀವ ಬಲಿ ಕೊಡೋ ನಿರ್ಧಾರ ಯಾಕೆ? ಹಾಗೆ ಮಾಡಿದರೆ ಮುಂದೆ ಇರೋ ಜೀವನದ ಪರೀಕ್ಷೆಯೇ ನಿಮ್ಮಿಂದ ಮಿಸ್ ಆಗುತ್ತೆ. ಪರೀಕ್ಷೆ ನೆಪದಲ್ಲಿ ಅದನ್ಯಾಕೆ ಮಿಸ್ ಮಾಡಿಕೊಳ್ಳುತ್ತೀರಿ? ಸಾಯುವ ದಾರಿ ನಿಮ್ಮದಲ್ಲ, ನಿಮ್ಮದು ಕಾಯುವ ದಾರಿ. ಮುಂದೆ ಏನೇನೋ ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆ. ಬರೀ ಪರೀಕ್ಷೆಯೇ ಎಲ್ಲವೂ ಅಲ್ಲ.
ಮರಳಿ ಯತ್ನಿಸಿ…
ಈ ಜಗತ್ತಿನಲ್ಲಿ ಒಂದೇ ಸಲಕ್ಕೆ ಯಾರೂ ಯಶಸ್ಸಿನ ಶಿಖರವನ್ನೇರಿಲ್ಲ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ವಿಜ್ಞಾನಿಯಾಗಿದ್ದೇ ಮನೆ ಮನೆಗೆ ಪೇಪರ್ ಹಾಕಿದ ನಂತರ. ವಾಜಪೇಯಿ, ಧೀರೂಬಾಯಿ ಅಂಬಾನಿ ಕೂಡ ಇದೇ ಹಾದಿಯಲ್ಲಿ ಸಾಗಿ ಗೆದ್ದವರು. ಇವರು ಯಾರೂ ರಾತೋರಾತ್ರಿ ಸಾಧನೆ ಮಾಡಿದವರಲ್ಲ. ಅದೆಷ್ಟೋ ಬಾರಿ ಸೋತವರು, ಅವಮಾನ ಅನುಭವಿಸಿದವರು. ಆದರೂ ಛಲ ಬಿಟ್ಟಿರಲಿಲ್ಲ. ಅವರ ಗುರಿ ಸ್ಪಷ್ಟವಾಗಿತ್ತು.
ಫೇಲಾಗಿದ್ದಕ್ಕೆ ನಿಮ್ಮ ಸ್ನೇಹಿತರು ಅಥವಾ ಬೇರೆ ಇನ್ಯಾರಾದ್ರೂ ಗೇಲಿ ಮಾಡ್ತಾರಾ? ತಲೆ ಕೆಡಿಸಿಕೊಳ್ಳಬೇಡಿ. ಡೋಂಟ್ ಕೇರ್ ಅನ್ನಿ. ಅವರು ನಿಮಗಿಂತ ಗ್ರೇಟ್ ಅಂತ ಆ ಕ್ಷಣಕ್ಕೆ ಅಂದುಕೊಂಡಿರಬಹುದು. ಆದರೆ ಆ ಕ್ಷಣವೇ ಜೀವನದ ಮಹತ್ವದ ಕ್ಷಣವಲ್ಲ. ಅದು ನಿಜವಾದ ಪರೀಕ್ಷೆಯೇ ಅಲ್ಲ. ಯಾವುದೋ ಪರೀಕ್ಷೆಯಲ್ಲಿ ಗೆದ್ದು ಕೈ ತುಂಬಾ ಸಂಬಳ ಪಡೆಯೋದೇ ಜೀವನವಲ್ಲ. ನೆಮ್ಮದಿಯ ಬದುಕಷ್ಟೇ ಬೇಕು ಎಂಬುದನ್ನು ಗಟ್ಟಿ ಮಾಡಿಕೊಳ್ಳಿ.
ಹೆತ್ತವರ ಬಗ್ಗೆ ಯೋಚಿಸಿ…
ಆತ್ಮಹತ್ಯೆ ಯೋಚನೆಯೇನೋ ತಟ್ಟನೆ ಬಂದು ಬಿಡಬಹುದು. ಆದರೆ ಇಷ್ಟು ವರ್ಷ ಸಲಹಿದವರ ಗತಿ? ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರಿಗೆ ಚಿಂತೆ ಇರಬಹುದು. ಹಾಗೆಂದು ಪರೀಕ್ಷೆಯಲ್ಲಿ ಪಾಸ್ ಆಗಿಲ್ಲವೆಂದ ಕೂಡಲೇ ನೀನು ಮಗನೇ ಅಲ್ಲ, ಮಗಳೇ ಅಲ್ಲ ಅಂತ ಯಾರಾದ್ರೂ ಹೇಳ್ತಾರಾ? ಹಾಗೆ ಆತ್ಮಹತ್ಯೆ ಮಾಡ್ಕೊಂಡ್ರೆ, ಮರುದಿನದಿಂದ ಆ ಹೆತ್ತವರು ಸುಖವಾಗಿ ಇರ್ತಾರಾ? ಅವರಿಗೆ ನೀವಿಲ್ಲದೆ ಬದುಕೋ ಸ್ಥೈರ್ಯ ಇರುತ್ತಾ? ಮಕ್ಕಳು ಎಷ್ಟೇ ದೊಡ್ಡವರಾದ್ರೂ, ಹೆತ್ತವರ ಪಾಲಿಗೆ ಕಂದಮ್ಮಗಳೇ. ಅವರೇನು ಮಾಡಿದ್ರೂ ಕ್ಷಮೆ ಇರುತ್ತೆ. ಸಾಯೋದು ಒಂದೇ ಪರಿಹಾರವಲ್ಲ.
ಸಾಧನೆಗೆ ಗುರಿಯಷ್ಟೇ ಸಾಕು…
ನೀವು ಪಾಸ್ ಆಗಿಯೇ ಎಲ್ಲವನ್ನೂ ಸಾಧಿಸಬೇಕಿಲ್ಲ. ಸಾಧನೆಗೆ ಬೇಕಾಗಿರುವುದು ಪರೀಕ್ಷೆಯ ಫಲಿತಾಂಶವಲ್ಲ. ಅಲ್ಲಿ ಬೇಕಾಗಿರುವುದು ಒಂದು ಸ್ಪಷ್ಟ ಗುರಿ. ಏನೋ ಮಾಡಬೇಕೆಂಬ ಛಲ. ಜತೆಗೊಂದಿಷ್ಟು ಆತ್ಮವಿಶ್ವಾಸ. ಎಲ್ಲದಕ್ಕೂ ಪರೀಕ್ಷೆಯೇ ಮಾನದಂಡವಲ್ಲ ಅಂದುಕೊಳ್ಳಿ. ಪರೀಕ್ಷೆಯಲ್ಲಿ ಫೇಲಾದ್ರೂ, ಜೀವನದಲ್ಲಿ ಗೆಲ್ತೀನಿ ಅನ್ನೋ ಗಟ್ಟಿ ನಿರ್ಧಾರವನ್ನು ಮಾಡಿಕೊಳ್ಳಿ. ನಿಮ್ಮನ್ನು ಸೋಲಿಸೋರು ಯಾರಿರ್ತಾರೆ?
ಓದದವರು ದಡ್ಡರಲ್ಲ..
ನಾವಿಂದು ರಾತ್ರಿಯನ್ನು ಹಗಲಿನಂತೆ ಕಳೆಯುತ್ತಿರುವ ಬಲ್ಬ್ ಪತ್ತೆ ಮಾಡಿದ್ದು ಥಾಮಸ್ ಎಡಿಸನ್. ನಂಬಿದ್ರೆ ನಂಬಿ, ಆತ ಶಾಲೆಗೆ ಹೋಗಿಯೇ ಇರಲಿಲ್ಲ. ಮೈಕ್ರೋಸಾಫ್ಟ್ ಎಂಬ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕ ಬಿಲ್ ಗೇಟ್ಸ್ ಯಾರಿಗೆ ತಾನೇ ಗೊತ್ತಿಲ್ಲ? ಆದ್ರೆ ಅವನು ಓದಿರೋದು ಹತ್ತನೇ ತರಗತಿ ಮಾತ್ರ! ಅಮೆರಿಕಾದ ಹಣೆಬರಹವನ್ನೇ ಬದಲಿಸಿದ ಅಬ್ರಹಾಂ ಲಿಂಕನ್ ಕಾಲೇಜು ಮೆಟ್ಟಿಲನ್ನೇ ಹತ್ತಿರಲಿಲ್ಲ. ಇನ್ನೊಬ್ಬ ಅಧ್ಯಕ್ಷ ವಿನ್ಸ್ಟನ್ ಚರ್ಚಿಲ್ ಆರನೇ ಕ್ಲಾಸಲ್ಲೇ ಫೇಲಾಗಿದ್ದ. ಡೆಲ್ ಕಂಪನಿಯ ಬಾಸ್ ಮೈಕೆಲ್ ಡೆಲ್ ಪಿಯುಸಿ ಹಂತದಲ್ಲೇ ಕಾಲೇಜಿಗೆ ದೊಡ್ಡ ನಮಸ್ಕಾರ ಹೊಡೆದಿದ್ದ.
ಅಷ್ಟೆಲ್ಲ ಯಾಕೆ, ನಮ್ಮ ವರನಟ ಡಾ. ರಾಜ್ಕುಮಾರ್ ಪ್ರೈಮರಿ ವಿದ್ಯಾಭ್ಯಾಸವನ್ನೂ ಮುಗಿಸಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಈಗ ದೊಡ್ಡ ಹೆಸರು ಮಾಡಿರುವ ಪುನೀತ್ ರಾಜ್ಕುಮಾರ್, ದರ್ಶನ್ ಓದಿದ್ದೇ ಹತ್ತನೇ ಕ್ಲಾಸು. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಗಾದಿಗೇರಿರುವ ಅಖಿಲೇಶ್ ಯಾದವ್ ಕೂಡ ಫೇಲಾಗಿ ಪಾಸಾದವರು. ಅವರೆಲ್ಲ ಯಾವುದರಲ್ಲಿ ಕಡಿಮೆ?
(ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ)
ಬ್ಯಾಚುಲರ್ ಮನೆ ನಿರ್ಮಾಣ ಹೇಗೆ?
Posted March 19, 2012
on:ಸಿಂಗಲ್ ಬೆಡ್ ರೂಮ್ ಮನೆ, ಡಬಲ್ ಬೆಡ್ ರೂಮ್ ಮನೆ ಎಂದೆಲ್ಲ ನಿರ್ಮಾಣದ ಹಂತದಲ್ಲಿ ಇಂಜಿನಿಯರುಗಳು ಪ್ರತ್ಯೇಕಗೊಳಿಸುವಾಗ ಒಂದನ್ನು ಮರೆತೇ ಬಿಡುತ್ತಾರೆ. ಅದು ಬ್ಯಾಚುಲರುಗಳ ಮನೆ. ಬ್ಯಾಚುಲರುಗಳಿಗೆ ಬಾಡಿಗೆ ಕೊಡಲೆಂದೇ ಕಟ್ಟಡ ನಿರ್ಮಿಸುವಾಗಲೂ ಈ ಬಗ್ಗೆ ಯಾರೂ ಹೆಚ್ಚು ಗಮನ ಕೊಡೋದೇ ಇಲ್ಲ.
ಬ್ಯಾಚುಲರುಗಳಿಗೆ ಮನೆ ಕಟ್ಟುವಾಗ ಒಂದಷ್ಟು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡರೆ ಚೆನ್ನಾಗಿರುತ್ತದೆ. ಐಟಿಗಳೇ ಇರಲಿ, ಯಾರೇ ಆಗಿರಲಿ; ಬ್ಯಾಚುಲರುಗಳೆಂದರೆ ಸೋಮಾರಿಗಳು, ಯಾವುದನ್ನೂ ಒಪ್ಪ ಓರಣವಾಗಿ ಇಡಲು ಮುಹೂರ್ತ ನೋಡುವವರು, ಅವರ ಚೇಷ್ಟೆಗಳೇ ಬೇರೆ, ಜೀವನವನ್ನು ಅನುಭವಿಸುವ ರೀತಿಯೇ ವಿಚಿತ್ರ, ವೈಫು ಇಲ್ಲದ ಅವರ ಲೈಫು ಇನ್ನೂ ಒಂದು ನಿರ್ದಿಷ್ಟ ದಿಕ್ಕಿನತ್ತ ಹೋಗಿರುವುದಿಲ್ಲ. ಈ ಅಂಶಗಳಿಗೆ ಗಟ್ಟಿಯಾಗಿ ಅಂಟಿಕೊಂಡರೆ ಆಗ ಅವರಿಗಾಗಿ ಕಟ್ಟುವ ಮನೆ ಹೇಗಿರಬೇಕು ಎಂಬ ಸ್ಪಷ್ಟ ಚಿತ್ರವೊಂದು ಕಣ್ಣ ಮುಂದೆ ಬರಬಹುದು.
ಸಿಕ್ಕಾಪಟ್ಟೆ ರೂಮು ಬೇಡ
ಬ್ಯಾಚುಲರುಗಳಿಗಾಗಿ ಎಂದೇ ಕಟ್ಟುವ ಮನೆಗಳಲ್ಲಿ ಹೆಚ್ಚುವರಿ ಕೊಠಡಿಗಳು ಬೇಕಾಗಿಲ್ಲ. ಸರಳವಾಗಿದೆ, ಎಲ್ಲವೂ ಸುಲಭ ಎಂಬಂತಿದ್ದರೆ ಸಾಕು. ಹೊರಗೊಂದು ಹಾಲ್, ಒಂದು ಓಪನ್ ಕಿಚನ್, ಒಂದು ಡೈನಿಂಗ್, ಇನ್ನೊಂದೆರಡು ಟಾಯ್ಲೆಟ್-ಬಾತ್ ರೂಮುಗಳು. ಮಲಗಲು ಸ್ವಲ್ಪ ದೊಡ್ಡದೆನಿಸುವ ಬೆಡ್ ರೂಮು. ಇಷ್ಟಿದ್ದರೆ ಸಾಕು. ಹುಡುಗರು ಯಾವತ್ತೂ ಮಿತಿಗಿಂತ ಹೆಚ್ಚು ಪ್ರೈವೆಸಿಗೆ ಒಗ್ಗಿಕೊಳ್ಳದ ಕ್ಯಾಟಗರಿಯವರು ಅನ್ನೋದನ್ನು ನೆನಪಿಡಿ.
ಬಟಾಬಯಲಾದರೂ ಓಕೆ
ಬ್ಯಾಚುಲರುಗಳ ಫ್ಲ್ಯಾಟ್ ಅಥವಾ ಮನೆ ರಸ್ತೆ ಬದಿಯಲ್ಲೇ ಇರಲಿ. ಅವರಿಗೆ ಶಬ್ಧ ಮಾಲಿನ್ಯ ಅಷ್ಟೇನೂ ಸಮಸ್ಯೆಯೆನಿಸದು. ಬದಲಿಗೆ ಅವರಿಂದಲೇ ಇಂತಹ ಸಮಸ್ಯೆಗೆ ತುತ್ತಾಗುವವರೇ ಜಾಸ್ತಿ. ಇದನ್ನೂ ಗಮನದಲ್ಲಿಟ್ಟುಕೊಳ್ಳಿ. ಇನ್ನು ಇಡೀ ಮನೆ ಎಲ್ಲೋ ಒಳಗೆ, ಯಾರಿಗೂ ಕಾಣದಂತಿರಬೇಕು ಎಂದಂತೂ ಹುಡುಗ್ರು ಬಯಸೋರೇ ಅಲ್ಲ. ಹೊರಗೊಂದು ವರಾಂಡವಿದ್ದರಂತೂ ಅವರ ವೀಕೆಂಡ್ ಖುಷಿಗೆ ಪಾರವೇ ಇರದು. ಹಾಗಿದ್ದರೆ ಬಾಡಿಗೆ ಎಷ್ಟೇ ಆದರೂ, ಆ ಬಗ್ಗೆ ಚಿಂತೆ ಮಾಡೋದಿಲ್ಲ.
ಕ್ಲೀನ್ ಮಾಡೋರಲ್ಲ…
ತಿಂದ ತಟ್ಟೆಯನ್ನೇ ತೊಳೆಯಲು ಹಿಂದೆ ಮುಂದೆ ನೋಡುವ ಬ್ಯಾಚುಲರುಗಳು ಕ್ಲೀನಿಂಗ್ ವಿಚಾರದಲ್ಲಿ ಜಗ ಜುಗ್ಗರು. ವಾರಕ್ಕೊಮ್ಮೆ ನೆಲ ಒರೆಸೋದೇ ಕಷ್ಟ. ಹಾಗಿರುವಾಗ ಅವರ ಮನಸ್ಥಿತಿಗೆ ಹೊಂದುವಂತಹ ಮನೆ ಕಟ್ಟುವುದೇ ಉತ್ತಮ. ಅಪರೂಪಕ್ಕೆ ಕ್ಲೀನ್ ಮಾಡಿದರೂ ಓಕೆ ಎನ್ನುವ ರೀತಿಯಲ್ಲಿರಲಿ ಒಳ ವಿನ್ಯಾಸ. ಅದಕ್ಕೆ ತಕ್ಕ ಮ್ಯಾಟ್ಗಳನ್ನೂ ಬಳಸಿ. ಅಲ್ಲಲ್ಲಿ ವಾಷ್ ಬೇಸಿನ್ ಇದ್ದರೆ ಉತ್ತಮ.
ಇಂಟೀರಿಯರ್ ಮರೆತು ಬಿಡಿ…
ಮನೆಯಲ್ಲಿ ಚಂದದ ಪೇಂಟಿಂಗ್ ಇದ್ದರೆ ಚೆನ್ನಾಗಿತ್ತು ಅಂತ ಖಂಡಿತಾ ಬ್ಯಾಚುಲರುಗಳು ಯೋಚಿಸೋದಿಲ್ಲ. ಈ ಖಾಲಿ ಜಾಗದಲ್ಲಿ ಸನ್ನಿ ಲಿಯೋನ್ ದೊಡ್ಡ ಪೋಸ್ಟರ್ ಹಾಕಿದ್ರೆ ಚೆನ್ನಾಗಿರುತ್ತೆ, ಇಲ್ಲಿ ಇಷ್ಟದ ಬಾಡಿ ಬಿಲ್ಡರ್ ಫೋಟೋ ಇರಲಿ, ಇನ್ನೊಂದು ಗೋಡೆಯಲ್ಲಿ ರಕ್ಕಸ ಬೈಕ್ ಡುಕಾಟಿ ಚಿತ್ರ ಅಂಟಿಸೋಣ ಅಂತಾನೇ ಯೋಚಿಸಿರ್ತಾರೆ. ಅದೆಷ್ಟೇ ಚಂದದ ಗೋಡೆಯಿದ್ರೂ, ಅಲ್ಲಿ ಇಂತಹ ಪೋಸ್ಟರುಗಳು ಬೀಳೋದನ್ನು ತಪ್ಪಿಸಲು ಸಾಧ್ಯವಾಗೋದಿಲ್ಲ. ಹಾಗಾಗಿ ಇಂಟೀರಿಯರ್ ಡಿಸೈನ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಗೋಡೆಗಳು ಖಾಲಿಯಾಗಿರಲಿ. ಸಾಧ್ಯವಾದರೆ ಪೋಸ್ಟರುಗಳನ್ನು ಹಾಕಲು ಸುಲಭವಾಗುವ ವ್ಯವಸ್ಥೆ ಮಾಡಿ. ಹೀಗೆ ಮಾಡುವುದರಿಂದ ಬ್ಯಾಚುಲರುಗಳಿಂದ ಗೋಡೆ ಹಾಳಾಗುವುದನ್ನೂ ತಪ್ಪಿಸಬಹುದು. ಕಿಟಕಿಗಳಿಗೆ ಪರದೆ ಹಾಕುವಾಗಲೂ ಬಿಳಿ ಬಣ್ಣ ಅಥವಾ ಸುಲಭವಾಗಿ ಕೊಳೆಯಾಗುವ ಬಣ್ಣವನ್ನು ಅವಾಯ್ಡ್ ಮಾಡಿ.
ದೊಡ್ಡ ಕನ್ನಡಿಯಿರಲಿ…
ಹುಡುಗಿಯರನ್ನು ಹುಡುಗರು ರೇಗಿಸುವ ಪಟ್ಟಿಯಲ್ಲಿ ಕನ್ನಡಿಯದ್ದೂ ಪ್ರಮುಖ ಸ್ಥಾನ. ಆದರೆ ಹುಡುಗರೇನೂ ಈ ವಿಚಾರದಲ್ಲಿ ಕಮ್ಮಿಯಿಲ್ಲ. ಯಾರೂ ಇಲ್ಲವೆಂದರೆ ಅವರು ಗಂಟೆಗಟ್ಟಲೆ ಕನ್ನಡಿ ಮುಂದೆ ಕಳೆಯಬಲ್ಲರು. ಹಾಗಾಗಿ ಹಾಲ್ನಲ್ಲೋ, ಬೆಡ್ ರೂಮಿನಲ್ಲೋ ದೊಡ್ಡದೊಂದು ಕನ್ನಡಿಯಿರಲಿ. ಜಿಮ್ಗೆ ಹೋಗಿ ಬಂದವರು ಪ್ರತಿ ಬಾರಿ ಮುಂದೆ ನಿಂತು ಅಡಿಯಿಂದ ಮುಡಿಯವರೆಗೆ ನೋಡಿ ಹೆಮ್ಮೆಯಿಂದ ಬೀಗುವಂತಿರಲಿ ಆ ಕನ್ನಡಿ.
ಫರ್ನೀಚರ್ ಹೀಗಿರಲಿ…
ಬ್ಯಾಚುಲರ್ಸ್ ಅಂದ ಮೇಲೆ ಗೆಳೆಯರ ದಂಡು ಜೋರಾಗಿಯೇ ಇರುತ್ತದೆ. ಹಾಗಾಗಿ ಒಂದಷ್ಟು ಹೆಚ್ಚುವರಿ ಕುರ್ಚಿಗಳು ಮನೆಯಲ್ಲಿದ್ದರೆ ಉತ್ತಮ. ನೆನಪಿಡಿ, ಇವರಿಗೆ ಬಣ್ಣದ ಮೋಹ ಜಾಸ್ತಿ. ಲೈಟ್ ಕಲರ್ ಅಥವಾ ಶುಭ್ರ ಬಿಳಿ ಬಣ್ಣಕ್ಕಿಂತ ಯಾವುದಾದರೂ ಡಾರ್ಕ್ ಕಲರ್ ಆರಿಸಿ. ಅದೇನೇ ಸರ್ಕಸ್ ಮಾಡಿದರೂ ಮುರಿದು ಹೋಗದ ಫರ್ನೀಚರ್ಸ್ ಇದ್ದರೆ ಮಾಲೀಕರು ಬಚಾವ್ ಆದಂತೆ. ಖರೀದಿ ಸಂದರ್ಭದಲ್ಲಿ ಬಾಳಿಕೆಯತ್ತಲೂ ಗಮನ ಕೊಡಿ.
ಟಿವಿ, ಹೋಮ್ ಥಿಯೇಟರ್…
ಎಲ್ಲೋ ದೂರದಿಂದ ಬಂದ ಬ್ಯಾಚುಲರ್ಸ್ಗೆ ಎಲ್ಲವನ್ನೂ ಮಾಲೀಕರೇ ಒದಗಿಸಬೇಕಾಗುತ್ತದೆ. ಆಗೆಲ್ಲ ನಿಮ್ಮ ಪಟ್ಟಿಯಲ್ಲಿ ದೊಡ್ಡದಾದ ಟಿವಿ, ಹೋಮ್ ಥಿಯೇಟರ್ ಕಡ್ಡಾಯವಾಗಿರಲಿ. ಅದೂ ಹಾಲ್ನಲ್ಲಿ ಎಲ್ಲರಿಗೂ ಅನುಕೂಲವಾಗುವಂತಿದ್ದರೆ ಚೆನ್ನಾಗಿರುತ್ತದೆ. ಇನ್ನು ಮೊಬೈಲ್, ಲ್ಯಾಪ್ಟಾಪ್ ಚಾರ್ಜ್ಗೆಂದು ಅಲ್ಲಲ್ಲಿ ಸಾಕೆಟ್ಗಳಿದ್ದರೆ ಉತ್ತಮ. ಬ್ಯಾಚುಲರುಗಳ ಗ್ಯಾಜೆಟ್ಸ್ಗಳ ವಿಶ್ರಾಂತಿಗೊಂದು ಭದ್ರ ನೆಲೆಯನ್ನೂ ಕಲ್ಪಿಸಿದರೆ, ಎಲ್ಲೆಂದರಲ್ಲಿ ದಿಕ್ಕು ದೆಸೆಯಿಲ್ಲದೆ ಬಿದ್ದಿರುವುದು ತಪ್ಪುತ್ತದೆ.
ಅಡುಗೆ ಮಾಡ್ತಾರಾದ್ರೆ…
ಈಗೀಗ ಬ್ಯಾಚುಲರುಗಳೂ ಸೆಲ್ಫ್ ಕುಕ್ಗಳಾಗುತ್ತಿದ್ದಾರೆ. ಅವರಿಗೆ ಬೇಕಾದ ವ್ಯವಸ್ಥೆಗಳನ್ನು ನೀವೇ ಮಾಡುವಿರಾದರೆ, ಹುಡುಗರ ಸ್ವಭಾವವನ್ನೂ ಅರಿತುಕೊಳ್ಳಿ. ಅವರಿಗೆ ತಾಳ್ಮೆ ಕಡಿಮೆ. ಎಲ್ಲವೂ ತಕ್ಷಣಕ್ಕೆ ಮುಗಿದು ಬಿಡಬೇಕು ಅನ್ನೋದ್ರಲ್ಲಿ ನಂಬಿಕೆ ಜಾಸ್ತಿ. ಹಾಗಾಗಿ ಮೈಕ್ರೋವೇವ್ ಒವೆನ್, ಟೋಸ್ಟರ್, ರೈಸ್ ಕುಕ್ಕರ್ ಮುಂತಾದ ಶಾರ್ಟ್ ಕಟ್ ಸಾಮಗ್ರಿಗಳಿರಲಿ. ಇಷ್ಟೆಲ್ಲ ಅನುಕೂಲಗಳನ್ನು ನೀವು ಮಾಡಿಕೊಡುತ್ತಿರುವುದು ಇನ್ನೂ ಲೈಫಲ್ಲಿ ಸೆಟ್ಲ್ ಆಗಿರದ ಕ್ಯಾಟಗರಿಯ ಬ್ಯಾಚುಲರ್ಸ್ಗಳಿಗೆ ಅನ್ನೋದನ್ನು ಮರೆಯಬೇಡಿ.
(ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ)
ಎರಡನೇ ಮನೆ ಖರೀದಿ ಯೋಚನೆ ಇದ್ಯಾ?
Posted March 19, 2012
on:ಮೊದಲನೇ ಮನೆಯೆಂದರೆ ಅದು ಭಾವಗಳ ಗೂಡು. ಯಾವ ದಿಕ್ಕಿನಿಂದ ನೋಡಿದರೂ ಆ ಮನೆಯ ಜತೆ ಮರೆಯಲಾರದ ಬಾಂಧವ್ಯವಿರುತ್ತದೆ. ಅದನ್ನು ತನ್ನದಾಗಿಸಿಕೊಳ್ಳಲು ಸುರಿಸಿದ ಬೆವರು, ಕಳೆದ ನಿದ್ದೆಯಿಲ್ಲದ ರಾತ್ರಿಗಳು, ಕೂಡಿಟ್ಟ ಹಣ ಎಲ್ಲವೂ ನಮ್ಮಲ್ಲಿ ಶಾಶ್ವತ ಸ್ಥಾನ ಪಡೆದಿರುತ್ತವೆ. ಆದರೆ ಎರಡನೇ ಮನೆಯೂ ಇದೇ ಅನುಭವವನ್ನು ನೀಡುವುದೇ?
ಇಲ್ಲ, ಖಂಡಿತಾ ಇಲ್ಲ. ಮೊದಲ ಮನೆಯೆಂದರೆ ಅದರ ಅರ್ಥ, ಅದಕ್ಕೂ ಮೊದಲು ತನ್ನದೆಂಬ ಮನೆ ಇರಲಿಲ್ಲವೆಂದು. ಹಾಗಾಗಿ ಮನೆಯೊಂದರ ಒಡೆಯನಾದ ಖುಷಿ, ರೋಮಾಂಚನ ವಿವರಿಸಿ ಮುಗಿಸಲಾಗದ ಅನುಭವ. ನಿರ್ದಿಗಂತವೆನಿಕೊಂಡಿದ್ದ ಗುರಿಯೊಂದು ಬೆರಳ ತುದಿಗೆ ತಗಲು ಹಾಕಿಕೊಂಡ ಹಗುರ ಭಾವ. ಆದರೆ ಎರಡನೇ ಮನೆ ಖರೀದಿ ಇಷ್ಟೆಲ್ಲ ಖುಷಿಯನ್ನು ನೀಡದು. ಅಲ್ಲಿರುವುದು ಒನ್ ಪ್ಲಸ್ ಒನ್ ಎಂಬಷ್ಟಕ್ಕೇ ಸೀಮಿತವಾಗುವ ಎಕ್ಸ್ಟ್ರಾ ಫೀಲಿಂಗ್. ಭಾವನೆಗಳಿಗೆ ಹೆಚ್ಚಿನ ಕೆಲಸ ಕೊಡುವ ಬದಲು, ಲೆಕ್ಕಾಚಾರವೇ ಪ್ರಧಾನವಾಗಿರುತ್ತದೆ.
ಇನ್ನೊಂದು ಮನೆ ಯಾಕೆ ಬೇಕು?
ನಿಮಗೆ ಇನ್ನೊಂದು ಫ್ಲ್ಯಾಟ್ ಬೇಕೆಂಬ ಯೋಚನೆ ಬಂದರೆ, ಆಗ ನಿಮಗೆ ನೀವೇ ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಿ. ಮೊದಲ ಪ್ರಶ್ನೆ, ನಿಮಗೆ ಎರಡನೇ ಮನೆಯ ಅಗತ್ಯ ಏನಿದೆ ಅನ್ನೋದು. ಇರೋ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಬೇಕೆಂದು ಎರಡನೇ ಮನೆಯ ಯೋಚನೆ ಮಾಡಿದ್ದೀರಾ ಅಥವಾ ನಿಮಗೆ ಇಬ್ಬರು ಮಕ್ಕಳಿದ್ದಾರೆ, ಹಾಗಾಗಿ ಇನ್ನೊಂದು ಫ್ಲ್ಯಾಟ್ ಇರಲಿ ಎಂಬ ಯೋಚನೆಯೇ? ಇದನ್ನು ಮೊದಲು ಪರಿಹರಿಸಿಕೊಳ್ಳಿ. ಎರಡನೇ ಮನೆ ಖರೀದಿಗೆ ಹೊರಟಿರುವುದು ಹೂಡಿಕೆ ಉದ್ದೇಶದಿಂದ ಎನ್ನುವುದೇ ಆಗಿದ್ದರೆ, ಆಗ ನೀವು ಅದರಿಂದ ಬರಬಹುದಾದ ಅಂದಾಜು ಬಾಡಿಗೆ ಮತ್ತು ಅಡ್ವಾನ್ಸ್ ಮೊತ್ತದ ಲೆಕ್ಕಾಚಾರ ಮಾಡಬೇಕಾಗುತ್ತದೆ. ನಿಮ್ಮ ಗುರಿ ಸ್ಪಷ್ಟವಾಗಿ ಹಣದ ಕಡೆಗೇ ಇರುವುದರಿಂದ, ಅದನ್ನು ಲಘುವಾಗಿ ಪರಿಗಣಿಸಬೇಡಿ.
ಅದೇ ಹೊತ್ತಿಗೆ ನಿಮ್ಮ ಉದ್ದೇಶ ಮಕ್ಕಳಿಗೆ ಹಂಚಲು ಎಂಬುದಾಗಿದ್ದರೆ, ಆಗ ಹಣಕಾಸೇತರ ವಿಚಾರಗಳನ್ನು ಗಮನಿಸಬೇಕು. ಕುಟುಂಬ ಹಂಚಿ ಹೋದರೂ ಹತ್ತಿರದಲ್ಲೇ ಮನೆಗಳು ಇರುವಂತೆ ನೋಡಿಕೊಳ್ಳುವುದು, ಇನ್ನೊಂದು ಮನೆಯ ಪರಿಸರ ಹೇಗಿದೆ ಅನ್ನೋದು ಸೇರಿದಂತೆ ಇತರ ಸಂಗತಿಗಳು ಮನೆಯ ಮೌಲ್ಯಕ್ಕಿಂತ ಪ್ರಮುಖವಾಗಿರಲಿ.
ಯಾವುದಕ್ಕೆ ಎಷ್ಟು ಬೇಕು?
ಹಣಕಾಸೇತರ ವಿಚಾರಗಳ ಕುರಿತು ನಿಮ್ಮ ನಿರ್ಧಾರ ಗಟ್ಟಿಯಾದ ಬಳಿಕ ನೀವು ಆರ್ಥಿಕ ಸಂಗತಿಗಳನ್ನು ಗಮನಿಸಬೇಕು. ಫ್ಲ್ಯಾಟ್ ಮೌಲ್ಯದ ಜತೆ, ಅದರ ನಿರ್ವಹಣೆ ವೆಚ್ಚ, ಪಾಲಿಕೆಗೆ ಪಾವತಿಸಬೇಕಾದ ತೆರಿಗೆ ಮತ್ತು ಇತರ ವೆಚ್ಚಗಳನ್ನು ಲೆಕ್ಕಾಚಾರ ಹಾಕಬೇಕು. ಇದರಲ್ಲಿ ವಿದ್ಯುತ್ ಮತ್ತು ನೀರಿನ ಬಿಲ್ ಕೂಡ ಸೇರಿರಲಿ. ಇವೆಲ್ಲದರ ವಾರ್ಷಿಕ ವೆಚ್ಚ ಎಷ್ಟು ಎಂಬುದನ್ನು ಕಂಡುಕೊಂಡರೆ, ಆಗ ನಿಮಗೆ ನಿರ್ದಿಷ್ಟ ವೆಚ್ಚದ ಅಂದಾಜು ಖಚಿತವಾಗುತ್ತದೆ. ಮನೆಯನ್ನು ಬಾಡಿಗೆ ಕೊಡುವುದಿದ್ದರೂ ಆಗ ಅದರಿಂದ ಬರುವ ಆದಾಯ ಮತ್ತು ಹೆಚ್ಚುವರಿ ವೆಚ್ಚಗಳು ಎಷ್ಟು ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಿ.
ಸಾಲದ ಲೆಕ್ಕವೂ ಇರಲಿ
ಎರಡನೇ ಮನೆ ಕೊಳ್ಳುವುದಿದ್ದರೆ, ಗೃಹಸಾಲ ಸೌಲಭ್ಯವೂ ಲಭ್ಯ. ಆದರೆ ಮೊದಲ ಮನೆಗೆ ಅನ್ವಯವಾಗುವ ಗೃಹಸಾಲಕ್ಕೂ, ಎರಡನೇ ಮನೆಯ ಗೃಹಸಾಲಕ್ಕೂ ಅನ್ವಯವಾಗುವ ನಿಯಮಗಳು ಒಂದೇ ರೀತಿಯಿರುವುದಿಲ್ಲ. ಮೊದಲ ಮನೆಗೆ ಶೇ.80ರಿಂದ ಶೇ.90ರಷ್ಟು ಬಂಡವಾಳವನ್ನು ಬ್ಯಾಂಕ್ ನೀಡಿದರೆ, ಎರಡನೇ ಮನೆಗೆ ಶೇ.75ರಷ್ಟು ಸಾಲ ಮಾತ್ರ ಲಭ್ಯ. ಹಾಗಾಗಿ ಮೂಲ ಬಂಡವಾಳದ ಲೆಕ್ಕಾಚಾರ ಮೊದಲೇ ಮಾಡಬೇಕು.
ಎರಡನೇ ಫ್ಲ್ಯಾಟ್ಗೆ ಕೊಡುವ ಸಾಲಕ್ಕೆ ಬ್ಯಾಂಕುಗಳು ಹೆಚ್ಚು ಬಡ್ಡಿಯನ್ನು ಕೂಡ ವಿಧಿಸಬಹುದು. ಜತೆಗೆ ನಿಮ್ಮ ಟೇಕ್ ಹೋಮ್ ಮಾಸಿಕ ವೇತನದ ಶೇ.50ರಷ್ಟಕ್ಕೆ ಎಲ್ಲಾ ಬ್ಯಾಂಕ್ ಸಾಲದ ಇಎಂಐಗಳು ಸೀಮಿತಗೊಳ್ಳುವುದರಿಂದ, ಎರಡನೇ ಮನೆಗೆ ಸಿಗಬಹುದಾದ ಸಾಲದ ಮೊತ್ತ ಎಷ್ಟು ಎನ್ನುವುದನ್ನು ಕೂಡ ಅಂದಾಜು ಮಾಡಬೇಕು. ಆದರೂ ಸಾಲದ ಮೊತ್ತ ಮತ್ತು ಬಡ್ಡಿ ಕುರಿತು ಬ್ಯಾಂಕುಗಳ ಜತೆ ವ್ಯವಹರಿಸುವಾಗ ಮೊದಲ ಮನೆಯ ಷೇರು ಗಮನದಲ್ಲಿರಲಿ. ಇದು ನಿಮಗೆ ಪ್ಲಸ್ ಪಾಯಿಂಟ್ ಆಗಬಹುದು.
ತೆರಿಗೆ ಮರೆಯದಿರಿ
ಆದಾಯ ತೆರಿಗೆ ವಿಚಾರಕ್ಕೆ ಬಂದಾಗ, ನಿಮ್ಮ ಎರಡನೇ ಫ್ಲ್ಯಾಟ್ ಬಾಡಿಗೆಗೆ ಕೊಡಲ್ಪಟ್ಟಿದೆ ಎಂದೇ ಪರಿಗಣಿಸಲ್ಪಡುತ್ತದೆ. ನೀವು ಆ ಮನೆಯನ್ನು ಬಾಡಿಗೆ ನೀಡದೆ ಇದ್ದರೂ, ನಿಮ್ಮ ಆದಾಯಕ್ಕೆ ಸ್ವಲ್ಪ ಮೊತ್ತವನ್ನು ಅದರಿಂದ ಸೇರಿಸಲಾಗುತ್ತದೆ. ಒಂದು ವೇಳೆ ಬಾಡಿಗೆಗೆ ನೀಡಿದ್ದರೆ, ನಿಜವಾದ ಮೊತ್ತ ಆದಾಯಕ್ಕೆ ಸೇರ್ಪಡೆಯಾಗುತ್ತದೆ. ಉದಾಹರಣೆಗೆ, ಮನೆಯೊಂದರ ಮಾಸಿಕ ಬಾಡಿಗೆ 20,000 ರೂ. ಆಗಿದ್ದರೆ, ವಾರ್ಷಿಕವಾಗಿ 1.68 ಲಕ್ಷ ರೂ.ಗಳಿಗೆ ತೆರಿಗೆ ಬೀಳುತ್ತದೆ.(20,000 12 = 2.40 ಲಕ್ಷಗಳು / ಶೇ.30 ಸ್ಟಾಂಡರ್ಡ್ ಡಿಡಕ್ಷನ್: 72,000 ರೂ./ ತೆರಿಗೆ ಅನ್ವಯವಾಗುವ ಮೊತ್ತ: 1.68 ಲಕ್ಷ ರೂ.)
ತಾಳ್ಮೆಯಿದ್ದರೆ ಲಾಭ ಜಾಸ್ತಿ
ಎರಡನೇ ಫ್ಲ್ಯಾಟ್ ಖರೀದಿಸಲು ಮುಂದಾಗುವಾಗ, ಅದರ ತುರ್ತು ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಬೇಕು. ಇಲ್ಲವೆಂದಾದರೆ, ತರಾತುರಿಯಲ್ಲಿ ಮುಗಿಬಿದ್ದು ಕೊಳ್ಳಲು ಹೋಗುವುದು ನಷ್ಟಕ್ಕೆ ಕಾರಣವಾಗಬಹುದು. ಅದರ ಬದಲು ಲೆಕ್ಕಾಚಾರ ಹಾಕಿ, ತಾಳ್ಮೆಯಿಂದ ಯಾವ ಫ್ಲ್ಯಾಟ್ ಆಗಬಹುದು ಎಂಬುದನ್ನು ನಿರ್ಧರಿಸಿದರೆ ಲಾಭ ಜಾಸ್ತಿ, ಜತೆಗೆ ನೆಮ್ಮದಿ ಕೂಡ.
(ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ)
ಗುಬ್ಬಚ್ಚಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕುತೂಹಲಕ್ಕೆ ಕಾರಣವಾದ ಪಕ್ಷಿಯದು. ಇಷ್ಟ ಬಂದಲ್ಲಿ ಕೂತು ಕಲರವ ಎಬ್ಬಿಸಿ ಪುಟಪುಟನೆ ಜಿಗಿದು, ಅತ್ತಿಂದಿತ್ತ ಹಾರುತ್ತ ಕಣ್ಣುಗಳಿಗೆ ವ್ಯಾಯಾಮ ಕೊಡುವ, ಸೋಮಾರಿ ಮಾನವನಿಗೆ ಬದುಕನ್ನು ಕಲಿಸಿಕೊಡುವ ಹಿಡಿಗಾತ್ರದ ಚಿಲಿಪಿಲಿ ಜೀವಗಳು ಇಂದು ತೀರಾ ಅಪರೂಪವಾಗುತ್ತಿವೆ. ಅದನ್ನು ವಿಶ್ವ ಗುಬ್ಬಚ್ಚಿಗಳ ದಿನವಾದ ಇಂದಾದರೂ (ಮಾರ್ಚ್ 20) ನೆನೆಯೋಣ.
ಮೊದಲೆಲ್ಲ ಬಸ್ಸು-ರೈಲು ನಿಲ್ದಾಣಗಳ ಚಾವಣಿಗಳಡಿಯಲ್ಲಿ, ಅಂಗಡಿಗಳ ಶಟರು ಬಾಗಿಲಿನ ಮೇಲುಗಡೆಯಲ್ಲಿ, ತಾರಸಿ ಕಟ್ಟಡಗಳಲ್ಲಿ ಉಳಿದು ಹೋದ ಜಾಗಗಳಲ್ಲಿ, ಒಡೆದು ಹೋದ ಗೋಡೆಯ ಬಿರುಕಿನಲ್ಲಿ, ಹೆಂಚಿನ ಮನೆಗಳ ಪಕ್ಕಾಸುಗಳಲ್ಲಿ — ಹೀಗೆ ಮನುಷ್ಯನಿಗೆ ಬಳಕೆಯಾಗದ ಸ್ಥಳಗಳು ಗುಬ್ಬಿಗಳಿಗೆ ಮನೆಯಾಗುತ್ತಿದ್ದವು. ಅಲ್ಲೆಲ್ಲ ಅದರ ಕಿಚಿಕಿಚಿ ಕೇಳಿ ಬರುತ್ತಿತ್ತು. ಆದರೆ ಮಾನವನ ಆಧುನಿಕತೆಯ ಲೋಲುಪತೆಗೆ ನಿರುಪದ್ರವಿಗಳ ಸಾಲಿನ ಮೊದಲನೇ ಹಕ್ಕಿ ಪರೋಕ್ಷವಾಗಿ ಬಲಿಯಾಗಿದೆ, ಆಗುತ್ತಿದೆ. ನಮ್ಮ ಕಣ್ಣುಗಳಿಂದ ಆ ಪಕ್ಷಿಯೀಗ ವೇಗವಾಗಿ ಕಣ್ಮರೆಯಾಗುತ್ತಿದೆ.
ಪ್ರಸಕ್ತ ತೀರಾ ಅಪರೂಪವಾಗಿರುವುದು ನಗರ ಪ್ರದೇಶಗಳಲ್ಲಿ. ಅದು ಎಷ್ಟರ ಮಟ್ಟಿಗೆ ಕಡಿಮೆಯಾಗಿದೆಯೆಂದರೆ, ಇಡೀ ದಿನ ತಿರುಗಿದರೂ ಹತ್ತಕ್ಕಿಂತ ಹೆಚ್ಚು ಗುಬ್ಬಿಗಳನ್ನು ಹುಡುಕಲು ಅಸಾಧ್ಯವೆನ್ನುವಷ್ಟು. ಹಾಗೆಂದು ಹಳ್ಳಿ ಪ್ರದೇಶಗಳಲ್ಲಿ ಹೆಚ್ಚಿವೆ ಎಂದರೆ ತಪ್ಪಾದೀತು. ಹಳ್ಳಿಗಳು ಕೂಡ ಇಂದು ಹಳ್ಳಿಗಳಾಗಿ ಉಳಿದಿಲ್ಲವಾದ್ದರಿಂದ, ಗುಬ್ಬಿಗಳಿಗೆ ಸಂಚಕಾರ ತಪ್ಪಿಲ್ಲ.
ಮೊದಲೆಲ್ಲ ಸೂರ್ಯನ ಕಿರಣಗಳು ಕಿಟಕಿ ಬಾಗಿಲಿನ ಮೂಲಕ ಮನೆಯೊಳಗೆ ಇಣುಕುವಾಗ ಅದರ ಜತೆಯಲ್ಲಿ ಗುಬ್ಬಿಗಳು ಕೂಡ ಮನೆಯೊಳಗೆ ಬರುತ್ತಿದ್ದವು. ಇದ್ದ-ಬದ್ದ ಅಕ್ಕಿ-ಕಾಳುಗಳನ್ನು ಹೆಕ್ಕುತ್ತಿದ್ದವು. ಊಟ ಮಾಡಿ ಪಾತ್ರೆ ತೊಳೆದಾಗ ಉಳಿದ ಆಹಾರವನ್ನು ಕೂಡ ನೆಚ್ಚುತ್ತಿದ್ದವು. ಎಲ್ಲೋ ಇದ್ದ ಹುಳ-ಹುಪ್ಪಟಿಗಳನ್ನು ಚೆಂಗನೆ ಜಿಗಿದು ತನ್ನ ಮುದ್ದಾದ ಕೊಕ್ಕಿನಲ್ಲಿ ಕುಕ್ಕಿ ತಿನ್ನುತ್ತಿದ್ದವು. ಹೇಗೋ ಹೊಟ್ಟೆ ಹೊರೆಯುತ್ತಿದ್ದವು.
ಮನೆಯೊಳಗೆ, ಮಕ್ಕಳ ಜತೆ ಕಣ್ಣಾಮುಚ್ಚಾಲೆಯಾಡುವಂತೆ ಬಂದು-ಹೋಗುತ್ತಿದ್ದವು. ಮುಟ್ಟಬೇಕೆನ್ನುವಾಗ ಪುರ್ರನೆ ಹಾರಿ ಕಿಟಕಿಯ ರಾಡುಗಳಲ್ಲಿ ಕೂರುತ್ತಿದ್ದವು. ಅಲ್ಲಿಗೂ ಚಿಣ್ಣರು ದಾಂಗುಡಿಯಿಟ್ಟಾಗ ಹೆಚ್ಚೇನೂ ಹೆದರದೆ ಅದಕ್ಕಿಂತ ಮೇಲಿನ ಜಾಗವನ್ನಷ್ಟೇ ಹುಡುಕುತ್ತಿದ್ದವು. ಕಿಚ್ಕಿಚ್ ಎನ್ನುತ್ತಾ ಮತ್ತೆ ಬರುತ್ತಿದ್ದವು. ಈಗಿನ ಮಕ್ಕಳಿಗೆ ಗುಬ್ಬಿಯೆಂದರೆ ಟ್ವಿಟ್ಟರ್ ಸಿಂಬಲ್ಗಿಂತ ಹೆಚ್ಚೇನೂ ಆಗಿರಲಾರದು.
ವಾಸ್ತವದಲ್ಲಿ ಗುಬ್ಬಚ್ಚಿ ದಟ್ಟ ಕಾಡಿನಲ್ಲಿ ಅಥವಾ ಮಾನವ ರಹಿತ ಪ್ರದೇಶಗಳಲ್ಲಿ ವಾಸಿಸುವ ಪಕ್ಷಿಯೇ ಅಲ್ಲ. ಕಂದು ಬಣ್ಣದಿಂದ ಕಂಗೊಳಿಸುವ, ಅಲ್ಲಲ್ಲಿ ಬಿಳಿ ಮತ್ತು ಕಪ್ಪು ಮಿಶ್ರಿತ ಬಣ್ಣಗಳನ್ನು ಹೊಂದಿರುವ ಸಂಘಜೀವಿ. ಅದಕ್ಕೆ ಜನನಿಬಿಡತೆ ಯಾವತ್ತೂ ತೊಂದರೆ ಅನ್ನಿಸಿದ್ದೂ ಇಲ್ಲ. ಜನರ ನಡುವೆಯಿದ್ದರೂ ತನ್ನ ಬದುಕು ಬೇರೆಯೇ ಎಂಬಂತೆ ಬದುಕುತ್ತಿದ್ದ ಚೆಂದನೆಯ ಹಕ್ಕಿಯದು.
ಕಾಗೆ-ನವಿಲು ಕೊಡುವ ರೀತಿಯ ತೊಂದರೆಗಳ ಕಿರಿಕಿರಿಯೂ ಅವುಗಳ ಮೇಲಿಲ್ಲ. ಆದರೂ ಅವುಗಳ ನಿರ್ಗಮನಕ್ಕೆ ಮಾನವನೇ ಪ್ರಮುಖ ಕಾರಣ. ಅವುಗಳನ್ನು ನಾವು ಓಡಿಸಿಲ್ಲವಾದರೂ, ಅವುಗಳು ಓಡಿ ಹೋಗಿರುವುದರಲ್ಲಿ ನಮ್ಮ ಪಾಲೇ ಗರಿಷ್ಠ. ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸುತ್ತ ಹಾರುವುದಕ್ಕಿಂತ ಹೆಚ್ಚಾಗಿ ಜಿಗಿಯುತ್ತಿದ್ದ ಹಕ್ಕಿಯೀಗ ಕಣ್ಮರೆಯಾಗಿದೆ. ಪಕ್ಷಿಪ್ರಿಯರಿಗೆ ನಿರಾಸೆಯಾಗಿದೆ.
ಗುಬ್ಬಿಗಳ ಕಣ್ಮರೆಗೆ ಕಾರಣಗಳೇನು?
ಗುಬ್ಬಚ್ಚಿಗಳು ನಗರ ಪ್ರದೇಶವನ್ನು ತ್ವರಿತ ಗತಿಯಲ್ಲಿ ತೊರೆದು ಪಟ್ಟಣಗಳನ್ನು, ಹಳ್ಳಿಗಳನ್ನು ಸೇರಿಕೊಳ್ಳುತ್ತಿವೆ. ನಗರಗಳಲ್ಲಿನ ಹಲವು ಅಂಶಗಳು ಗುಬ್ಬಿಗಳಿಗೆ ಮಾರಕವಾಗುತ್ತಿರುವುದೇ ಈ ಸಾಮೂಹಿಕ ವಲಸೆಗೆ ಕಾರಣ ಎಂದು ಹೇಳಲಾಗುತ್ತಿದೆ. ಅವುಗಳೇನೆಂದು ನೋಡೋಣ.
* ಮೊಬೈಲ್ ಟವರುಗಳ ಪ್ರಬಲ ತರಂಗಾಂತರಗಳು.
* ಕ್ರಿಮಿ-ಕೀಟಗಳ ನಾಶಕ್ಕೆ ಕೀಟನಾಶಕ ಬಳಕೆ.
* ಕಟ್ಟಡಗಳ ನೂತನ ವಿನ್ಯಾಸಗಳಿಗೆ ಹೊಂದಿಕೊಳ್ಳಲು ಅಸಾಧ್ಯವಾಗಿರುವುದು.
* ಕಟ್ಟಡಗಳಲ್ಲಿ ಗಾಜುಗಳನ್ನು ಹೆಚ್ಚು ಬಳಕೆ ಮಾಡುತ್ತಿರುವುದು.
* ಮನೆ-ಅಡುಗೆ ಮನೆಗಳಲ್ಲಿ ಆಗಿರುವ ಬದಲಾವಣೆ, ಶುಚಿತ್ವ ಹೆಚ್ಚಿರುವುದು.
* ಪರಿಸರ ನಾಶ, ನಗರಗಳಲ್ಲಿ ಇದ್ದ ಮರ-ಗಿಡಗಳು ಕೂಡ ಮರೆಯಾಗುತ್ತಿರುವುದು.
* ಗೂಡು ಕಟ್ಟಲು ಬೇಕಾದ ಸರಕುಗಳು ಸಿಗದೇ ಇರುವುದು.
* ಕಾಮೋದ್ರೇಕ ಔಷಧಿ ಹೆಸರಿನಲ್ಲಿ ಕೊಲ್ಲುತ್ತಿರುವುದು.
ಗುಬ್ಬಿಗಳನ್ನು ಉಳಿಸೋದು ಹೇಗೆ?
ನಗರವನ್ನು ಈಗಾಗಲೇ ತೊರೆದಿರುವ ಗುಬ್ಬಚ್ಚಿಗಳನ್ನು ಮರಳಿ ಕರೆಸುವುದು ಸುಲಭದ ಮಾತಲ್ಲ. ಆದರೂ ಸತತ ಶ್ರಮ ವಹಿಸಿದರೆ ನಿಧಾನವಾಗಿ ಅವುಗಳನ್ನು ಮರಳಿಸಬಹುದು. ಅದಕ್ಕೆ ಮಾಡಬೇಕಾಗಿರುವ ಪ್ರಮುಖ ಕೆಲಸವೆಂದರೆ ಮಾನವ ಬದಲಾಗುವುದು, ಗುಬ್ಬಿಗೆ ಬೇಕಾದ ವಾತಾವರಣವನ್ನು ಸೃಷ್ಟಿಸುವುದು. ಅವುಗಳೇನೆಂದು ಸಂಕ್ಷಿಪ್ತವಾಗಿ ನೋಡೋಣ.
* ಗುಬ್ಬಚ್ಚಿ ಗೂಡುಗಳನ್ನು ಮನೆಗಳಲ್ಲಿ, ಮನೆಯೆದುರಿನ ಮರಗಳಲ್ಲಿ ತೂಗು ಹಾಕುವುದು.
* ಮನೆಯ ಎದುರು ಅಥವಾ ತಾರಸಿ ಮೇಲೆ ತೊಟ್ಟಿಯಲ್ಲಿ ನೀರಿಡುವುದು. ಹಾಗೆ ಮಾಡಿದಲ್ಲಿ ಗುಬ್ಬಿಗಳು ಕುಡಿಯಲು ಮತ್ತು ಸ್ನಾನ ಮಾಡಲು ಈ ನೀರನ್ನು ಬಳಸುತ್ತವೆ.
* ಸಣ್ಣ ಪ್ರಮಾಣದಲ್ಲಿ ಸಣ್ಣ ಗಾತ್ರಕ್ಕೆ ಪುಡಿಗೈಯಲ್ಪಟ್ಟ ಅಕ್ಕಿ-ಕಾಳುಗಳನ್ನು ಪ್ಲೇಟುಗಳಲ್ಲಿ ಇಡುವುದು.
* ಮನೆಯೆದುರು ಗಿಡ-ಮರಗಳನ್ನು ಬೆಳೆಸುವುದು.
* ನಗರಗಳಲ್ಲಿ ಅಲ್ಲಲ್ಲಿ ಪಾರ್ಕುಗಳನ್ನು ನಿರ್ಮಿಸುವುದು.
ನಾವು ಮಕ್ಕಳಾಗಿದ್ದಾಗ, ಮನ ನೊಂದ ಸಂದರ್ಭದಲ್ಲಿ, ಮನೆಯೆದುರಿನ ಅಂಗಳದಲ್ಲಿ ಗುಬ್ಬಚ್ಚಿಯ ಆಟವನ್ನು ನೋಡಿ ದುಃಖವನ್ನೆಲ್ಲಾ ಮರೆಯುತ್ತಿದ್ದೆವಲ್ಲ? ಅಳುವ ಮಗುವಿಗೆ ಗುಬ್ಬಚ್ಚಿಯನ್ನು ತೋರಿಸಿ ಅದೆಷ್ಟು ಅಮ್ಮಂದಿರು ಮಕ್ಕಳನ್ನು ಸಂತೈಸಿಲ್ಲ? ಇಂತಹಾ ಗುಬ್ಬಚ್ಚಿ ಅಥವಾ ಗುಬ್ಬಿಯ ಹೆಸರಲ್ಲಿ ಅಂತಾರಾಷ್ಟ್ರೀಯ ದಿನವೇ ಇರುವುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಈ ದಿನವಾದರೂ ಗುಬ್ಬಚ್ಚಿಗಳ ಉಳಿವಿನ ಬಗೆಗೆ ಚಿಂತಿಸೋಣ.