ಪ್ರೀತಿಯ ಹೂಗಳು…

Archive for the ‘ಸಾಂಸ್ಕೃತಿಕ ಲೋಕ’ Category

ಪ್ರೀತಿಯ ವಿಷ್ಣುವಿಗೆ,

ಸಣ್ಣದೊಂದು ಸುಳಿವನ್ನೂ ನೀಡದೆ, ಎಲ್ಲಾ ಸಾಲವನ್ನು ತೀರಿಸಿದವನಂತೆ ಸಾವಿನ ಹಿಂದೆ ಹೋದ ದಿನಕ್ಕೀಗ ವರ್ಷ ತುಂಬಿದೆ. ಅಂದು ಕೆಲವರು ಬಿಕ್ಕಿದರು, ದುಃಖಿಸಿದರು, ಅತ್ತರು, ಕೆಲವರು ಸತ್ತಂತೆ ನಟಿಸಿದರು, ಪ್ರಚಾರದ ಆಸೆಯಿಂದ ಇಲ್ಲದ ಕಣ್ಣೀರು ಸುರಿಸಿದರು, ನೋವುಂಡವರಂತೆ ನಾಟಕ ಮಾಡಿದರು, ಹಾಡಿ ಹೊಗಳಿದರು, ಇನ್ನು ಕೆಲವರು ಇವೆಲ್ಲದರ ಹೆಸರಿನಲ್ಲಿ ಸಂಭ್ರಮಿಸಿದರು.

ಅಂದು ತೀರಾ ಭಾವುಕರಾಗಿದ್ದ ನಿನ್ನ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಬೆಳ್ಳಂಬೆಳಗ್ಗೆ ಯಾರೋ ಫೋನ್ ಮಾಡಿ ವಿಷ್ಣುವರ್ಧನ್ ಹೋಗಿ ಬಿಟ್ಟರು ಎಂದು ಹೇಳಿದ್ದರು. ನಂಬಿರಲಿಲ್ಲ. ಟಿವಿ ನೋಡಿದೆ. ‘ವಿಷ್ಣುವರ್ಧನ್ ಇನ್ನಿಲ್ಲ’ ಎಂಬ ಸುದ್ದಿ ಬರುತ್ತಿತ್ತು. ಒಂದು ಕ್ಷಣ ಅಸಹಾಯಕನಾಗಿ ಹೋದೆ. ಕಣ್ಣಿಂದ ಅಚಾನಕ್ ಆಗಿ ನೀರು ಹೊರ ಬಂತು.

ಹೋದೋರೆಲ್ಲ ಒಳ್ಳೆಯವರು, ಹರಸೋ ಹಿರಿಯರು
ಅವರ ಸವಿಯ ನೆನಪು ನಾವೇ, ಉಳಿದ ಕಿರಿಯರು
ನಿನ್ನ ಕೂಡ ನೆರಳ ಹಾಗೆ, ಇರುವೆ ನಾನು ಎಂದೂ ಹೀಗೆ…

ಒಂಟಿಯಲ್ಲ ನೀ..

ನಾಳೆ ನಮ್ಮ ಮುಂದೆ ಇಹುದು, ದಾರಿ ಕಾಯುತಾ
ದುಃಖ ನೋವು ಎಂದೂ ಜತೆಗೆ, ಇರದು ಶಾಶ್ವತಾ
ಭರವಸೆಯ ಬೆಳ್ಳಿ ಬೆಳಕು,
ಹುಡುಕಿ ಮುಂದೆ ಸಾಗಬೇಕು ಧೈರ್ಯ ತಾಳುತಾ…

ಮೇಲಿನ ಸಾಲುಗಳು ಬಿಟ್ಟೂ ಬಿಡದೆ ನೆನಪಾದವು, ಕಾಡಿದವು. ಅವೆಲ್ಲ ಈಗ ಕಾಲಗರ್ಭಕ್ಕೆ ಸೇರಿ ಹೋಗಿದೆ. ದುಃಖ, ನೋವುಗಳನ್ನು ಖಂಡಿತಕ್ಕೂ ನಾವು ಮರೆತಿದ್ದೇವೆ. ಆದರೆ ನಿನ್ನನ್ನು ಮರೆತಿಲ್ಲ. ಮರೆತವರ ಬಗ್ಗೆ ಬೇಸರಗಳಿವೆ. ಅವರನ್ನು ಕಂಡಾಗ ಅಸಹ್ಯವಾಗುತ್ತಿದೆ.

ಬಿಡು, ಹೇಗಿದ್ದೀಯಾ ರಾಮಾಚಾರಿ?

ಇಲ್ಲಿ ನಾನು ಮತ್ತು ನನ್ನಂತಹ ಲಕ್ಷಾಂತರ ಅಭಿಮಾನಿಗಳು ಕ್ಷೇಮವಾಗಿದ್ದೇವೆ, ನಿನ್ನಂತೆ — ನೀನು ಕಳೆದ ವರ್ಷದ ಡಿಸೆಂಬರ್ 29ರ ರಾತ್ರಿ ಮಲಗುವ ಹೊತ್ತಿನಲ್ಲಿ ಇದ್ದ ಹಾಗೆ. ಸದ್ಯಕ್ಕೆ ಬರುವ ಯೋಚನೆ ಖಂಡಿತಾ ಇಲ್ಲ, ಅಷ್ಟಕ್ಕೂ ಅದು ನನ್ನ/ನಮ್ಮ ಕೈಯಲ್ಲಿ ಇಲ್ಲ, ನಿನ್ನಂತೆ — ಯಾವಾಗ ಬೇಕಾದರೂ ಬರಬಹುದು.

ಬಿಡು, ನಮ್ಮ ವಿಚಾರ ಅಷ್ಟೊಂದು ತಲೆ ಕೆಡಿಸುವ ಮಹತ್ವ ಹೊಂದಿರಲಾರದು. ಯಾರೋ ಪತ್ರ ಬರೆದಿದ್ದಾರೆ ಅಂದ ಮೇಲೆ ಇಲ್ಲಿನ ಪರಿಸ್ಥಿತಿ ಬಗ್ಗೆ ಬರೆದೇ ಇರುತ್ತಾರೆ ಎಂದು ನಿರೀಕ್ಷಿಸಿರುತ್ತೀಯ.

ನಾನು ಕೆಲವೊಂದು ಹೇಳಲೇಬೇಕಾದ ವಿಚಾರಗಳಿವೆ. ನೀನು ನಿರ್ಲಿಪ್ತ ಎಂದು ನನಗೆ ಗೊತ್ತು. ನಾನು ಹೇಳುವ ಮಾತುಗಳು ನಿನಗೆ ನೋವು ತರುವ ಬದಲು ವಿಮರ್ಶೆಗೆ ಹಚ್ಚಲಿದೆ ಎನ್ನುವಷ್ಟು ಅಥವಾ ಅದು ನನಗೆ ಗೊತ್ತು ಎಂದು ನೀನು ಅಂದುಕೊಳ್ಳುವಷ್ಟು ನನಗೆ ನೀನು ಗೊತ್ತು.

ಹಾಗಿದ್ದರೆ ಕೇಳು, ಮೊದಲನೆಯದಾಗಿ ನಿನ್ನನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ನಿಜಕ್ಕೂ ಬಡವಾಗಿಲ್ಲ! ಎರಡನೆಯದಾಗಿ ನಿನ್ನ ಹೆಸರು ಹೇಳಿಕೊಂಡು ಅತ್ತೂ ಕರೆದವರು ಇಂದು ನಿನ್ನ ಹೆಸರಿನಲ್ಲಿ ಹಣ ಮಾಡಲು ಹೊರಟಿದ್ದಾರೆ. ಮೂರನೆಯದಾಗಿ ನೀನು ಯಾರಿಗೆ ಸೇರಿದವನು ಎಂಬ ಬಗ್ಗೆ ಭಾರೀ ಗೊಂದಲವಿದೆ.

ನಿನ್ನನ್ನು ಹೆತ್ತು-ಹೊತ್ತು ಸಲಹಿದ್ದು ನಿನ್ನ ತಂದೆ-ತಾಯಿ. ನಿನ್ನನ್ನು ಚಿತ್ರರಂಗದಲ್ಲಿ ನೆಲೆಗೊಳಿಸಿದ್ದು ಪುಟ್ಟಣ್ಣ ಕಣಗಾಲ್. ಸ್ನೇಹದಲ್ಲಿ ಹೆಗಲಿಗೆ ಹೆಗಲಾದದ್ದು ದ್ವಾರಕೀಶ್. ಕೈ ಹಿಡಿದದ್ದು ಭಾರತಿ. ಇವರಲ್ಲಿ ಮೊದಲ ಮೂರು ಮಂದಿ ನಿನಗಿಂತ ಮೊದಲೇ ಹೊರಟವರು. ಕೊನೆಯ ಎರಡು ಮಂದಿ ನಿನ್ನ ಜೀವನದ ವಿವಿಧ ಮಜಲುಗಳಲ್ಲಿ ಹತ್ತಿರವಾಗಿದ್ದವರು ಮತ್ತು ದೂರವಾದವರು.

ಆದರೆ ಈಗ ಮಾತ್ರ ಬೀದಿಯಲ್ಲಿ ನಿಂತು ಅವರಿಬ್ಬರು ನಿನ್ನ ವಿಚಾರದಲ್ಲೇ ಕಚ್ಚಾಡುತ್ತಿದ್ದಾರೆ. ನಿನ್ನ ಅಗಲಿಕೆಯ ದುಃಖಕ್ಕಿಂತ ಪ್ರತಿಷ್ಠೆಯೇ ದೊಡ್ಡದು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಒಬ್ಬರು ಸ್ನೇಹದ ಸಬೂಬು ಕೊಟ್ಟು ಮಸಾಲೆ ಚಿತ್ರ ಮಾಡಿ ಹಣ ಮಾಡಲು ಹೊರಟರೆ, ಅವರಿಗೆ ಬೆಂಬಲ ನೀಡಲು ನಿನ್ನನ್ನು ‘ಅಪ್ಪಾಜಿ’ ಎಂದು ಕರೆಯುತ್ತಿದ್ದವರು ಪಣ ತೊಟ್ಟಿದ್ದಾರೆ.

ನಿನ್ನನ್ನೇ ಜೀವ ಎಂದು ಪರಿಗಣಿಸಿದ ಜೀವ ಅಂದಿನಿಂದ ಇಂದಿನವರೆಗೂ ಹೆಣಗಾಡುತ್ತಿದೆ. ಆ ಜೀವದ ನೋವುಗಳಿಗೆ ಸಾಂತ್ವನ ಹೇಳಬೇಕಾದ ಕೈಗಳು ಸುತ್ತ ಕೋಲು ಹಿಡಿದು ಹಳೆ ದ್ವೇಷ ಸಾಧಿಸಲು ಕಾದು ನಿಂತಿವೆ. ನೀನು ಬದುಕಿದ್ದಾಗ ಸುಮ್ಮನಿದ್ದ ಭೂತಗಳು ಈಗ ದಿಗ್ಗನೆದ್ದು ಬೆದರಿಸುತ್ತಿವೆ.

ಬದುಕಿದ್ದಾಗಲೇ ನಿನ್ನನ್ನು ಬೇರೆಯೇ ತಕ್ಕಡಿಯಲ್ಲಿ ತೂಗಿದ ಜನ, ಅಂದು ಇಂದ್ರ-ಚಂದ್ರ ಎಂದು ಹೊಗಳಿದ ಚಿತ್ರರಂಗದ ಮಂದಿ ನಿನ್ನದೇ ಧ್ಯಾನದಲ್ಲಿದ್ದಾರೆ ಎಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಅಂತವರೆಲ್ಲ ಇಂದು ನಿನ್ನ ಹೆಸರಿನ ಬದಲಿಗೆ ಬೇರೆ ಹೆಸರನ್ನು ತಂದಿದ್ದಾರೆ. ಕನ್ನಡ ಚಿತ್ರರಂಗ ಬಡವಾಗಿದೆ ಎಂಬ ಯಾವೊಂದು ಅಂಶವೂ ಅಲ್ಲಿ ಕಾಣುತ್ತಿಲ್ಲ. ಎಲ್ಲರೂ ಸುಖವಾಗಿದ್ದಾರೆ, ನೆಮ್ಮದಿಯಿಂದಿದ್ದಾರೆ.

ಅತ್ತ ನಿನ್ನ ‘ಜಲೀಲ್’ ಇದ್ಯಾವುದರ ಉಸಾಬರಿಯೇ ಬೇಡ ಎಂದು ದೂರ ನಿಂತಿದ್ದಾನೆ. ಅವನಿಂದ ಯಾವ ಗುಟುರು ಕೂಡ ಈಗ ಹೊರಗೆ ಬರುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ಬದಿಗೆ ನಿಲ್ಲುತ್ತಾನೆ. ಈ ಜನರೇ ಇಷ್ಟು ಎನ್ನುವುದು ಅವನಿಗೂ ತಿಳಿದು ಹೋದಂತಿದೆ.

ಅಂದು ನಿನಗೆ ಎರಡೆರಡಡಿ ಎರವಲು ಮೀಸೆಯನ್ನು ಅಂಟಿಸಿದ ಮಂದಿಯಂತೂ ತಪ್ಪಿಯೂ ನಿನ್ನನ್ನು ನೆನಪಿಸಿಕೊಳ್ಳುತ್ತಿಲ್ಲ. ಪರಭಾಷೆಯ ಸಿಡಿಗಳನ್ನು ತಂದು ನಿನ್ನ ಮನೆಯಲ್ಲಿ ಗುಡ್ಡೆ ಹಾಕಿದ ಮಂದಿ ಬೇರೆ ಮನೆ ನೋಡಿಕೊಂಡಿದ್ದಾರೆ. ವಿಷ್ಣುವರ್ಧನ್ ಎಂಬ ವಿಷ್ಣುವರ್ಧನ್ ನಮ್ಮಲ್ಲಿ ಇದ್ದ ಎಂಬುದು ಮರೆತು ಹೋದಷ್ಟು, ನೀನು ಕಾಲವಾಗಿ ಎಷ್ಟೋ ವರುಷಗಳು ಸಂದಿವೆ ಎಂಬಂತೆ ಎಲ್ಲರೂ ಸಿನಿಮೀಯವಾಗಿ ಸುಮ್ಮನಿದ್ದಾರೆ.

ಇಲ್ಲದೇ ಇದ್ದರೆ ನಿನ್ನ ಸ್ಮಾರಕ ಆ ಅಭಿಮಾನ್ ಸ್ಟುಡಿಯೋದಲ್ಲಿ ಎದ್ದು ನಿಲ್ಲುತ್ತಿತ್ತು. ನಿನ್ನ ನೆನಪಾದಾಗಲೆಲ್ಲ ಬಂದು ಸುಮ್ಮನೆ ಕೂತು ಹೋಗಬಹುದಾದ ರಚನೆಯೊಂದು ಅಲ್ಲಿರುತ್ತಿತ್ತು. ಚೆನ್ನೈಯಲ್ಲಿರುವ ಎಂಜಿಆರ್ ಸಮಾಧಿಯಂತೆ ನಿನ್ನ ಉಸಿರಿನ ಸದ್ದು ಕೇಳಿಸುತ್ತಿದೆಯೋ ಎಂದು ನಾನೂ ಕೇಳುತ್ತಿದ್ದೆ. ಬಿಡು, ಅಂತಹ ಆಡಂಬರ, ಗೌರವಗಳನ್ನು ನೀನು ಬದುಕಿರುವಾಗಲೂ ನಿರೀಕ್ಷೆ ಮಾಡಿದವನಲ್ಲ. ಈ ತುಂಡು ರಾಜಕಾರಣಿಗಳ ಕೃಪಾಕಟಾಕ್ಷದಿಂದ ನಿರ್ಮಾಣವಾಗುವ ಸ್ಮಾರಕದಿಂದ ನಿನ್ನ ಗೌರವ ಹೆಚ್ಚಾಗಬೇಕೂ ಇಲ್ಲ.

ಆದರೆ ಒಂದು ಮಾತ್ರ ಸತ್ಯ. ನಿನ್ನನ್ನು ರಾಮಚಾರಿಯಿಂದ ಹಿಡಿದು ಡಾ. ವಿಜಯ್ ತನಕ ಅಷ್ಟೂ ವರ್ಷಗಳ ಕಾಲ ಪ್ರೀತಿಸಿದ, ಆರಾಧಿಸಿದ ನಿನ್ನನ್ನು ತಂದೆಯ, ಅಣ್ಣನ, ಮಗನ ಸ್ಥಾನದಲ್ಲಿಟ್ಟ ಅಭಿಮಾನಿಗಳು ಮರೆತಿಲ್ಲ. ನೀನು ಬಿಟ್ಟು ಹೋದ ಸಾವಿರ-ಸಾವಿರ ನೆನಪುಗಳು ಈಗಲೂ ನಮ್ಮನ್ನು ಬಾಧಿಸುತ್ತಿವೆ, ಕಾಡುತ್ತಿವೆ, ಏನನ್ನೋ ಬೇಡುತ್ತಿವೆ.

ನೀನು ಮತ್ತೆ ಹುಟ್ಟಿ ಬಾ. ನಾಗರಹಾವಿನ ರಾಮಚಾರಿಯಾಗಿ ಬಾ, ಕರ್ಣದ ತ್ಯಾಗಮಯಿ ಮಗನಾಗಿ ಬಾ, ಬಂಧನದ ಬೇಕು-ಬೇಡವೆನ್ನುವ ಪ್ರೇಮಿ ಡಾ. ಹರೀಶನಾಗಿ ಬಾ, ಸುಪ್ರಭಾತದ ಮೆಕ್ಯಾನಿಕ್ ವಿಜಯ ಕುಮಾರನಾಗಿ ಬಾ, ಮಲಯ ಮಾರುತದ ವಿಶ್ವನಾಥನಾಗಿ ಬಾ, ಮುತ್ತಿನಹಾರದ ತಂದೆಯಾಗಿ ಬಾ.

ಆದರೆ ಸಾಹಸಸಿಂಹನ ಹೆಸರಿನಲ್ಲಿ ಬರಬೇಡ. ನಿನಗೆ ಯಾವ ನಿಟ್ಟಿನಲ್ಲೂ ಹೊಂದಾಣಿಕೆಯಾಗದ ಬಿರುದು ಅದು. ನೀನು ಏನಿದ್ದರೂ ಅಭಿನಯ ಭಾರ್ಗವ, ಕನ್ನಡ ಕುಲಕೋಟಿಯ ಮೇರು ತಿಲಕ. ನಿನಗೆ ಯಾರೂ ಸಾಟಿಯಲ್ಲ, ನಿನಗೆ ನೀನೇ ಸಾಟಿ.

ಇಂತಿ ನಿನ್ನ ಅಭಿಮಾನಿ,

XXX

(ಈ ಲೇಖನ ವೆಬ್‌ದುನಿಯಾದಲ್ಲಿ ಪ್ರಕಟವಾಗಿದೆ)

‘ಬಾರೇ.. ಬಾರೇ.. ಚೆಂದದ ಚೆಲುವಿನ ತಾರೆ..’ ಎನ್ನುತ್ತಾ ಓಡೋಡಿ ಬರುವ ರಾಮಚಾರಿ ಇನ್ನಿಲ್ಲವೆಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಶಾರೀರಕ್ಕೆ ವಿರಾಮಕೊಟ್ಟು ಮೌನವನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಿದ್ದ ಅವರ ಶರೀರ ಇಂದು ಜೀವ ಕಳೆದುಕೊಂಡು ಅನಾಥವಾಗಿದೆ.

ವಿಷ್ಣುವರ್ಧನ್ ಜೀವ ಮಾತ್ರ ಅನಾಥವಾಗಿದೆ ಎಂದರೆ ಬಹುದೊಡ್ಡ ಪ್ರಮಾದವಾದೀತು. ಕನ್ನಡದ ಕೋಟಿ ಕೋಟಿ ಜನತೆ, ಪ್ರೀತಿಯಿಂದ ಅಣ್ಣಾ, ಅಪ್ಪಾ ಎಂದು ಕರೆಯುತ್ತಿದ್ದ ಅಭಿಮಾನಿಗಳು ಮತ್ತು ಮಕ್ಕಳಿಲ್ಲದಿದ್ದರೂ ಕೊರಗದೆ ಪ್ರೀತಿಯಿಂದ ಬಾಳ ದೋಣಿಗೆ ಹುಟ್ಟು ಹಾಕುತ್ತಿದ್ದ ಪತ್ನಿ ಭಾರತಿಯವರನ್ನು ಅವರು ಅನಾಥರನ್ನಾಗಿಸಿದ್ದಾರೆ.

ವಿಷ್ಣುವರ್ಧನ್ ಇಲ್ಲದ ಕನ್ನಡ ಸಿನಿಮಾ ಜಗತ್ತನ್ನು ಊಹಿಸಲೂ ಕಷ್ಟವಾಗುತ್ತಿದೆ. ಅವರೆಂದರೆ ಗೌರವ, ಅವರೆಂದರೆ ಘನತೆ, ಅವರೆಂದರೆ ಧೈರ್ಯ, ಅವರೆಂದರೆ ಮೌನ, ಅವರೆಂದರೆ ಸಾಂತ್ವನ, ಅವರೆಂದರೆ ಸರಳತೆಯ ಸಾಕಾರಮೂರ್ತಿ– ಹೀಗೆ ಕನ್ನಡ ನಾಡಿಗೆ, ಚಿತ್ರರಂಗಕ್ಕೆ ಅಗತ್ಯವಿದ್ದ ಎಲ್ಲವೂ ವಿಷ್ಣು ಅವರಲ್ಲಿತ್ತು.

ವಿಷ್ಣುವರ್ಧನ್ ಆಪತ್ಬಾಂಧವ, ಅನಾಥರಕ್ಷಕ, ಆಪ್ತಮಿತ್ರ, ಗುರು, ಮಾರ್ಗದರ್ಶಕ, ಆಧ್ಯಾತ್ಮಿಕ ಚಿಂತಕ, ಸಮಾಜ ಸೇವಕ ಮತ್ತು ಕೆಲವರಿಗೆ ನಿಗೂಢ ವ್ಯಕ್ತಿ. ಹಾಗಾಗಿ ಅವರ ಹೆಸರನ್ನು ಕೇವಲ ಐದಾರು ಪದಗಳಲ್ಲಿ ಹೇಳಿ ಮುಗಿಸಲಾಗದು.

ಯಾವತ್ತೂ ತನ್ನ ನೋವನ್ನು ಮತ್ತೊಬ್ಬರ ಮೇಲೆ ಹೇರಿದವರಲ್ಲ. ಮತ್ತೊಬ್ಬರ ನೋವನ್ನು ಡಂಗೂರ ಬಾರಿಸಿ ಕೇಳಿಸಿಕೊಂಡವರೂ ಅಲ್ಲ. ಯಾರಿಗೂ ತಿಳಿಯದಂತೆ ಸಹಾಯ ಮಾಡುವುದು ಅವರ ದೊಡ್ಡ ಗುಣಗಳಲ್ಲೊಂದು. ರಾಜಕೀಯ-ರಾಜಕಾರಣದಿಂದ ಅಗತ್ಯ ಅಂತರವನ್ನಿಟ್ಟುಕೊಂಡೇ ಸಾಗಿದ ಅವರು ಯಾವತ್ತೂ ಪ್ರಚಾರಕ್ಕಾಗಿ ಹಂಬಲಿಸಿದವರಲ್ಲ. ಟೀಕೆ-ಟಿಪ್ಪಣಿಗಳಿಗೆ ಜಪ್ಪೆನ್ನದೆ, ತನ್ನ ಆತ್ಮಸಾಕ್ಷಿಯನ್ನು ಹೆಚ್ಚಾಗಿ ನಂಬಿಕೊಂಡಿದ್ದವರು.

ವ್ಯಕ್ತಿತ್ವದಲ್ಲಿ ನಿಗೂಢತೆಯನ್ನೇ ಮನೆ ಮಾಡಿಕೊಂಡ ವಿಷ್ಣು ಚಿತ್ರರಂಗದಲ್ಲಿ ಆಪ್ತರಾಗಿ ಉಳಿದುಕೊಂಡದ್ದು ಅಂಬರೀಷ್ ಒಬ್ಬರಿಗೆ ಮಾತ್ರ. ದ್ವಾರಕೀಶ್ ಜತೆ ಹಲವು ಚಿತ್ರಗಳಲ್ಲಿ ನಟಿಸಿ ಒಂದೇ ಜೀವವೆನಿಸಿಕೊಂಡಿದ್ದರೂ, ತಪ್ಪು ಗ್ರಹಿಕೆಗಳಿಂದಾಗಿ ಜೋಡಿ ಬೇರಾದದ್ದು ಅವರ ಜೀವನದಲ್ಲಿನ ಬಹುದೊಡ್ಡ ದುರಂತ. ಆಪ್ತಮಿತ್ರ ಚಿತ್ರದಲ್ಲಿ ಈ ಸ್ನೇಹ ಪುನರುಜ್ಜೀವನಗೊಳ್ಳುವ ಲಕ್ಷಣಗಳು ಕಂಡಿದ್ದವು. ಆದರೆ ಅದು ಕೆಲವೇ ದಿನಗಳಿಗಷ್ಟೇ ಸೀಮಿತವಾಗಿ ಹೋಯಿತು.

ರಾಜ್ ಜೊತೆ ಚಿತ್ರ ಜೀವನದ ಆರಂಭದಲ್ಲಿ ಪೈಪೋಟಿಗೆ ಬಿದ್ದಿದ್ದರಾದರೂ ಅದು ಕೆಲವೇ ವರ್ಷಗಳಲ್ಲಿ ಸ್ನೇಹವಾಗಿ ಮಾರ್ಪಟ್ಟಿತ್ತು. ಈ ಬಗ್ಗೆ ಹುಟ್ಟಿದ್ದ, ಕೆದರಿದ್ದ ವಿವಾದಗಳೇನೆ ಇದ್ದರೂ ಇಂದು ಮಣ್ಣಲ್ಲಿ ಮಣ್ಣಾಗಿ ಹೋಗಿದೆ.

ನಟನಾ ಚಕ್ರವರ್ತಿ…
ನಾಗರಹಾವು ಚಿತ್ರದಲ್ಲಿನ ಮುಂಗೋಪಿ ರಾಮಚಾರಿ, ಗಂಧದ ಗುಡಿಯ ಸುಂದರ ಖಳ ಆನಂದ, ಕರ್ಣ ಚಿತ್ರದ ತ್ಯಾಗಮಯಿ, ಮುತ್ತಿನಹಾರದ ಕೆಚ್ಚೆದೆ ಸೈನಿಕ, ಬಂಧನದ ವಿರಹಿ, ಸುಪ್ರಭಾತದ ಮೆಕ್ಯಾನಿಕ್, ಮಲಯ ಮಾರುತದ ಸಂಗೀತಪ್ರೇಮಿ, ನಿಷ್ಕರ್ಷದ ಕಮಾಂಡೋ, ನಿಶ್ಯಬ್ಧದ ಸಾಹಸಿ, ಯಜಮಾನದ ದೌಲತ್ತು… ಒಂದೇ ಎರಡೇ– ವಿಷ್ಣುವನ್ನು ಮರೆಯಲು ಯಾರಿಗಾದರೂ ಕಾರಣಗಳೇ ಸಿಗದು.

ಪ್ರೇಮಿ, ಪೊಲೀಸ್, ರೌಡಿ, ಅಣ್ಣ, ಅಪ್ಪ ಯಾವುದೇ ಪಾತ್ರವಿರಲಿ, ಜೀವ ತುಂಬಿ ನಟಿಸುವುದು ವಿಷ್ಣು ಸ್ಪೆಶಾಲಿಟಿ. ಅದೆಂತಹಾ ಪಾತ್ರವಿದ್ದರೂ ನ್ಯಾಯ ಸಲ್ಲಿಸದೆ, ಬರೇ ಹರಕೆ ಸಲ್ಲಿಸುವ ಜಾಯಮಾನ ಅವರದ್ದಾಗಿರಲಿಲ್ಲ. ತರಾತುರಿಯಲ್ಲಿ ಚಿತ್ರೀಕರಣ, ನಿರ್ದೇಶಕರಿಗೆ ಕಿರಿಕಿರಿ, ಸಹನಟರಿಗೆ ಅಗೌರವ, ನಟಿಯರೊಂದಿಗೆ ಅಸಭ್ಯ ವರ್ತನೆ, ಸಂಭಾವನೆ ಚೌಕಾಶಿ ಇವೆಲ್ಲ ಅವರ ಜೀವನದ ನಿಘಂಟಿನಲ್ಲಿ ನೆರಳಾಡಿಸದ ಪದಗಳು.

ಅದು ಅವರ ವೃತ್ತಿಜೀವನದ ಕೊನೆಯ ಹಂತದವರೆಗೂ ಮುಂದುವರಿದಿತ್ತು. ಅವರ ಬಿಡುಗಡೆಯಾದ ಕೊನೆಯ ಚಿತ್ರ ಬಳ್ಳಾರಿ ನಾಗ. ಚಿತ್ರೀಕರಣ ಮುಗಿದು ಬಿಡುಗಡೆಗೆ ಕಾಯುತ್ತಿರುವ ಚಿತ್ರ ಆಪ್ತರಕ್ಷಕ. ಚಿತ್ರೀಕರಣವಾಗಬೇಕಿದ್ದ ಚಿತ್ರ ಮಾಸ್ಟರ್. ಕನ್ನಡ ಹೊರತಾಗಿ ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ವಿಷ್ಣು ನಟಿಸಿದ್ದು ಅವರ ಹೆಗ್ಗಳಿಕೆ.

ಮೊನ್ನೆ ಮೊನ್ನೆಯವರೆಗೆ ರೌಡಿ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದ ಜೀವವದು. ಅಪಾಯಕಾರಿ ಕುದುರೆ ಸವಾರಿಯಲ್ಲಿ ಬಿದ್ದರೂ ಎದ್ದು ಸುಧಾರಿಸಿ ‘ಏನೂ ಆಗಿಲ್ಲ’ ಎಂದು ಉತ್ತರಿಸುವ ಗಟ್ಟಿಗನ ಎದೆಯನ್ನು ಇಷ್ಟು ಬೇಗ ಜವರಾಯ ಕುಟ್ಟುತ್ತಾನೆ ಎಂದು ಅರಿತವರಾರು?

ಅವರೇ ಹಾಡಿದ ‘ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ..’ ಗೀತೆಯ ಮಾಧುರ್ಯವನ್ನು ಮರೆಯಲುಂಟೆ?, ‘ಈ ಭೂಮಿ ಬಣ್ಣದ ಬುಗುರಿ..’, ‘ನೂರೊಂದು ನೆನಪು ಎದೆಯಾಳದಿಂದ..’, ‘ಆ ಕರ್ಣನಂತೆ.. ನೀ ದಾನಿಯಾದೆ…’ ಪ್ರೇಮದಾ ಕಾದಂಬರಿ, ಬರೆದೆನು ಕಣ್ಣೀರಲಿ…. ಹೀಗೆ ಒಂದೆರಡಲ್ಲ ನೂರಾರು ಗೀತೆಗಳಿಗೆ ಹೆಜ್ಜೆ ಹಾಕಿ ಕಲಾ ರಸಿಕರ ಹೃನ್ಮನಗಳನ್ನು ತಣಿಸಿ, ತೋಯಿಸಿದ ಕೀರ್ತಿ ವಿಷ್ಣುವರ್ಧನ್ ಅವರದ್ದು.

ನಾಯಕತ್ವ ಬೇಕೆಂದವರಲ್ಲ…
ವರನಟ ರಾಜ್ ಕುಮಾರ್ ಅಗಲಿದ ನಂತರ ನಾಯಕತ್ವ ಕೊರತೆ ಎದುರಿಸುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಸಾಹಸಸಿಂಹ ವಿಷ್ಣುವರ್ಧನ್ ಮಾರ್ಗದರ್ಶಕರಾಗಿದ್ದರು. ಅದು ಬುಧವಾರ ಸೂರ್ಯ ಹುಟ್ಟುವ ಮೊದಲೇ ಅವರ ಹೆಗಲಿಂದ ಜಾರಿಕೊಂಡಿದೆ.

ರಾಜ್ ನಿಧನದ ಆಘಾತವನ್ನು ಚಿತ್ರರಂಗ ಇನ್ನೂ ಪೂರ್ತಿಯಾಗಿ ಅರಗಿಸಿಕೊಂಡಿಲ್ಲ, ಚೇತರಿಸಿಕೊಂಡಿಲ್ಲ. ನಿನ್ನೆಯಷ್ಟೇ ಸುಗಮ ಸಂಗೀತ ಲೋಕದ ಗಂಧರ್ವ ಗಾನ ಗಾರುಡಿಗ ಸಿ. ಅಶ್ವತ್ಥ್ ಹೊರಟು ಹೋಗಿದ್ದರು. ಅವರ ಬೆನ್ನಿಗೆ ವಿಷ್ಣು ತಿರುಗಿ ಬಾರದ ಊರಿಗೆ ಹೊರಟು ಹೋದ ಸುದ್ದಿ ಎಲ್ಲರಿಗೂ ಬರಸಿಡಿಲು.

ಯಾವತ್ತೂ ನಾಯಕತ್ವ ಬೇಕೆಂದು ವಿಷ್ಣು ಮುಂದೆ ಬಂದವರಲ್ಲ. ಇತ್ತೀಚಿನ ವರ್ಷಗಳಲ್ಲಿ ಆಧ್ಯಾತ್ಮದತ್ತ ಹೆಚ್ಚಿನ ಒಲವು ತೋರಿಸುತ್ತಿದ್ದ ಅವರು, ಚಿತ್ರರಂಗದಲ್ಲಿ ಅಭಿಮಾನಿಗಳಿಗೋಸ್ಕರ ಮಾತ್ರ ಉಳಿದುಕೊಂಡಿದ್ದೇನೆ ಎಂದು ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದರು. ನಾಯಕನಾಗಲು ನಾನು ಯಾರು, ನಾನೇ ಏಕೆ ನಾಯಕನಾಗಬೇಕು ಎಂಬಂತಹ ವಿಚಿತ್ರ ಪ್ರಶ್ನೆಗಳು ಅವರಿಂದ ಬರುತ್ತಿದ್ದವು. ಪತ್ರಿಕಾಗೋಷ್ಠಿಗಳಲ್ಲಂತೂ ಮಾತಿಗೆ ಕೂತರೆ ವೇದಾಂತವನ್ನೇ ಅವರು ಉಸಿರಾಡುತ್ತಿರುವುದು ತಿಳಿದು ಬರುತ್ತಿತ್ತು.

ಯಾರು ಎಷ್ಟೇ ಟೀಕೆಗಳನ್ನು ಮಾಡಿದರೂ ಅವುಗಳತ್ತ ಶಾಂತಚಿತ್ತರಾಗಿ ಉಳಿದುಕೊಳ್ಳುವುದು ಅವರ ವಿಶೇಷತೆ. ಇವರೇನಾ ಆ ರಾಮಚಾರಿ ಎಂಬಷ್ಟು ಬದಲಾವಣೆ ಅವರಲ್ಲಿ ಕಾಣಬಹುದಾಗಿತ್ತು.

ಪ್ರತಿ ಕಲಾವಿದರನ್ನೂ ಗೌರವದಿಂದಲೇ ಅದರಲ್ಲೂ ಸ್ತ್ರೀಯರಿಗೆ ಹೃದಯದಲ್ಲಿ ಮಾತೆಯ ಸ್ಥಾನ ಕಲ್ಪಿಸಿದ್ದ ಅವರು ಯಾವತ್ತೂ ಮತ್ತೊಬ್ಬರನ್ನು ಉದ್ದೇಶಪೂರ್ವಕವಾಗಿ ನೋಯಿಸಿದವರಲ್ಲ. ತನ್ನಿಂದಾಗಿ ಯಾರಿಗೂ ತೊಂದರೆಯಾಗಬಾರದೆಂಬುದೇ ಅವರ ಆಶಯವಾಗಿತ್ತು.

ಕನ್ನಡದ ಉಸಿರಿಗೆ ಧಕ್ಕೆ ಬರುತ್ತದೆ ಎಂಬಂತಾದಾಗ ಬೀದಿಗಿಳಿದು ಹೋರಾಟ ಮಾಡಿದ ಛಾತಿ ಅವರದ್ದು. ರಾಜ್ ಕುಮಾರ್, ಅಂಬರೀಷ್ ಜತೆ ಸೇರಿ ಹಲವು ಪ್ರತಿಭಟನೆ, ರ‌್ಯಾಲಿಗಳಲ್ಲಿ ಪಾಲ್ಗೊಂಡು ನ್ಯಾಯ ದೊರಕಿಸಿದ್ದ ವಿಷ್ಣು, ಇತ್ತೀಚಿನ ವರ್ಷಗಳಲ್ಲಿ ಎಲ್ಲವೂ ದೈವೇಚ್ಛೆ ಎಂಬಂತೆ ನಡೆದುಕೊಂಡಿದ್ದು ಅಚ್ಚರಿ ಮೂಡಿಸಿತ್ತು.

ಹೃದಯ ವೈಶಾಲ್ಯತೆಯಲ್ಲಿ ಅಂಬರೀಷ್ ಅವರಿಗೆ ಸರಿಗಟ್ಟಿ ನಿಲ್ಲುವ ವ್ಯಕ್ತಿತ್ವ ವಿಷ್ಣುವರ್ಧನ್‌ರದ್ದು. ಮಕ್ಕಳಿಲ್ಲದ ಕಾರಣಕ್ಕೆ ಕೊರಗದೆ ಇಬ್ಬರು ದತ್ತು ಮಕ್ಕಳನ್ನು ಪಡೆದ ವಿಷ್ಣು-ಭಾರತಿ, ಸ್ನೇಹಲೋಕ ಎಂಬ ಸಂಘಟನೆಯೊಂದನ್ನು ಹುಟ್ಟು ಹಾಕಿ ಕೈಲಾದ ಸಹಾಯವನ್ನು ಬಡ-ಬಗ್ಗರಿಗೆ ಮಾಡುತ್ತಿದ್ದರು. ಇತ್ತೀಚೆಗೆ ಉತ್ತರ ಕರ್ನಾಟಕ ನೆರೆಯಲ್ಲಿ ಮುಳುಗಿದಾಗಲೂ ವಿಷ್ಣು ಬೀದಿಗಿಳಿದು ನಿಧಿ ಸಂಗ್ರಹಿಸಿದ್ದನ್ನು ಕೂಡ ಮರೆಯಲಾಗದು.

ಕನ್ನಡ ಚಿತ್ರರಂಗಕ್ಕೆ, ಕರ್ನಾಟಕಕ್ಕೆ, ಅಭಿಮಾನಿಗಳಿಗೆ ಇಷ್ಟೆಲ್ಲಾ ಆಗಿದ್ದ ವಿಷ್ಣುವರ್ಧನ್ ಅಗಲಿಕೆಯ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ. ಮತ್ತೊಬ್ಬ ರಾಮಚಾರಿಯನ್ನು, ಭಗ್ನಪ್ರೇಮಿ ಡಾ. ಹರೀಶ್, ಯಜಮಾನನನ್ನು ಹುಡುಕಿ ತರುವುದು ಸಾವಿಲ್ಲದ ಮನೆಯ ಸಾಸಿವೆಯನ್ನು ತರುವಷ್ಟೇ ಕಷ್ಟದ ಕೆಲಸ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಷ್ಟೇ ನಮ್ಮಿಂದ ಸಾಧ್ಯವಾಗಬಹುದಾದ ಕೆಲಸ.

(ವಿಷ್ಣುವರ್ಧನ್ ಅಸ್ತಂಗತರಾದ ದಿನ ವೆಬ್‌ದುನಿಯಾದಲ್ಲಿ (http://kannada.webdunia.com) ಈ ಲೇಖನ ಪ್ರಕಟವಾಗಿದೆ)