ಪ್ರೀತಿಯ ಹೂಗಳು…

ಸರ್ವರೋಗ ವೈದ್ಯ ಕೊಕ್ಕಡ ವೈದ್ಯನಾಥೇಶ್ವರ

Posted on: December 23, 2012

Temple

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನ

ಪುರಾತನದ ಕುಕ್ಕುಟಪುರ, ಈಗಿನ ಕೊಕ್ಕಡದಲ್ಲಿ ನೆಲೆಸಿರುವ ಹತ್ತು ಗ್ರಾಮಗಳ ಗ್ರಾಮದೇವತೆ ಶ್ರೀ ವೈದ್ಯನಾಥೇಶ್ವರ ಸಕಲ ರೋಗ ರುಜಿನಗಳಿಗೆ ವೈದ್ಯನೆಂಬುದು ಪ್ರತೀತಿ.

ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ದ್ವಾಪರ ಯುಗದ ಉದ್ಭವ ಲಿಂಗದ ದರ್ಶನ ಪಾಂಡವರಿಗೆ ಆಗಿತ್ತು ಎಂಬಲ್ಲಿಂದ, ಸ್ವತಃ ಪಾಂಡವರಿಗೇ ವೈದ್ಯನಾಥೇಶ್ವರ ಔಷಧಿ ಕೊಟ್ಟಿದ್ದ; ಇಲ್ಲಿರುವ ಕಲ್ಯಾಣಿಯನ್ನು ಸ್ವತಃ ಭೀಮನೇ ನಿರ್ಮಿಸಿದ್ದ ಎಂಬ ಐತಿಹ್ಯವಿದೆ.

ಶಿಶಿಲೇಶ್ವರನ ತಲೆಗೆ ಗಾಯವಾಗಿದ್ದಾಗ ಇದೇ ವೈದ್ಯನಾಥೇಶ್ವರ ಮದ್ದು ಕೊಟ್ಟು ಗುಣಪಡಿಸಿದ್ದ. ಆಗ ಉಂಟಾದ ಗೊಂದಲದಲ್ಲಿ ಶಿಶಿಲೇಶ್ವರ ಶಾಪ ಕೊಟ್ಟಿದ್ದರಿಂದಲೇ ಇಂದಿಗೂ ಕ್ಷೇತ್ರದ ಕಲ್ಯಾಣಿಯ ಮೀನುಗಳು ಚಿಕ್ಕದಾಗಿವೆ ಎಂದು ಇಲ್ಲಿನ ಪುರಾಣ ಹೇಳುತ್ತದೆ.

ಕ್ಷೇತ್ರದ ಕೆರೆಯಲ್ಲಿ ಮಿಂದವರ ಕುಷ್ಠರೋಗವೂ ವಾಸಿಯಾಗಿದೆ. ಯಾವುದೇ ಕಾಯಿಲೆಯಿದ್ದರೂ, ತೀರ್ಥ ಚಿಮುಕಿಸಿದಲ್ಲಿ ಗುಣಮುಖವಾಗುತ್ತದೆ. ಜಾನುವಾರುಗಳ ಸಮಸ್ಯೆಗೂ ಇಲ್ಲಿ ಪರಿಹಾರ ಸಿಗುತ್ತದೆ ಎನ್ನುವುದು ಊರ-ಪರವೂರ ಭಕ್ತರ ನಂಬಿಕೆ.

Kalyani

ಭೀಮ ನಿರ್ಮಿಸಿದ ಐತಿಹ್ಯ ಹೊಂದಿರುವ ಕಲ್ಯಾಣಿ.

ಇಲ್ಲಿನ ಧ್ವಜಸ್ತಂಭ ಮತ್ತು ಕೆರೆಯ ನಡುವಿನ ನೀಲಕಂಠ ಲಿಂಗವನ್ನು ನರಸಿಂಹ ದೇವರಾಯನೆಂಬ ರಾಜ ಯುದ್ಧ ಗೆದ್ದಾಗ ಪ್ರತಿಷ್ಠಾಪಿಸಿದ್ದ ಎಂಬುದಕ್ಕೆ ಶಾಸನದ ಸಾಕ್ಷಿಯಿದೆ.

ಗರ್ಭಗುಡಿ ಎಡಭಾಗದಲ್ಲಿ ಗಣಪತಿ, ಬಲಭಾಗದಲ್ಲಿ ಉಳ್ಳಾಲ್ತಿ. ದೇಗುಲದ ಹೊರಗೆ ಎಡಭಾಗದಲ್ಲಿ ವಿಷ್ಣುಮೂರ್ತಿ ಗುಡಿ. ಕಲ್ಯಾಣಿಯ ಪಕ್ಕದಲ್ಲೇ ಅಣ್ಣಪ್ಪನ ಕಟ್ಟೆ. ದೇಗುಲದ ಎದುರಿನಲ್ಲಿ ನಿಜ ಬನದೊಳಗೆ ನಾಗಬನ ವಿಶೇಷ. ರಂಗಪೂಜೆ ಮತ್ತು ಏಕಾದಶರುದ್ರ ಇಲ್ಲಿನ ವಿಶೇಷ ಸೇವೆಗಳು.

ಅಣ್ಣಪ್ಪ ಗುಡಿ:
ಕೈಲಾಸದಿಂದ ವೈದ್ಯನಾಥೇಶ್ವರನ ಜತೆ ಕೊಕ್ಕಡಕ್ಕೆ ಬಂದು ಧರ್ಮಸ್ಥಳಕ್ಕೆ ಮುನಿಸಿಕೊಂಡು ಹೋಗಿದ್ದ ಅಣ್ಣಪ್ಪ, ಮತ್ತೆ ಬರಬೇಕೆಂದರೆ ಕ್ಷೇತ್ರದಲ್ಲಿ ಅನ್ನದಾನ ನಡೆಯಬೇಕು ಎಂದು ಹೇಳಿದ್ದನಂತೆ. ಅದರಂತೆ ಈಗ ಇಲ್ಲಿ ಭೋಜನ ಶಾಲೆ ಮತ್ತು ಅಣ್ಣಪ್ಪ ಗುಡಿ ನಿರ್ಮಾಣವಾಗುತ್ತಿದೆ.

Nandi

ಗರ್ಭಗುಡಿಯ ಎದುರು ಇರುವ ನಂದಿ ಭುಜ.

ನಂದಿ ಭುಜ:
ಭೀಮ ಕೋಪದಿಂದ ಗದೆಯನ್ನು ಬಂಡೆಗೆ ಬಡಿದಾಗ ನಂದಿ ಮೂರು ತುಂಡಾಗಿ ಸಿಡಿದು ಭುಜದ ಭಾಗ ಕೊಕ್ಕಡದಲ್ಲಿ, ಬಾಲದ ಭಾಗ ಶಿಶಿಲದಲ್ಲಿ ಹಾಗೂ ತಲೆಯ ಭಾಗ ರಾಮಕುಂಜದಲ್ಲಿ ಹೋಗಿ ಬಿದ್ದಿತ್ತು. ಇದರ ಕುರುಹು ಎಂಬಂತೆ ನಂದಿಯ ಭುಜದಂತೆ ಕಾಣುವ ಕಲ್ಲು ಗರ್ಭಗುಡಿಯ ಎದುರಲ್ಲೇ ಕಾಣಸಿಗುತ್ತದೆ.

ಡಿ.16ಕ್ಕೆ ಕೋರಿ ಜಾತ್ರೆ:
ಇಲ್ಲಿ ಹರಕೆ ತೀರಿಸಲು ಕೋಣ, ಎತ್ತು, ಹಸು, ಕರುಗಳನ್ನೂ ಕಂಬಳ ಗದ್ದೆಯಲ್ಲಿ ಓಡಿಸುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿ ಹರಕೆ ಹೊತ್ತವರು ಕಂಬಳಕ್ಕೆ ಸೊಪ್ಪು ಹಾಕುತ್ತಾರೆ. ಇದೇ ಕೋರಿ ಜಾತ್ರೆ ವಿಶೇಷ. ಈ ವರ್ಷ ಡಿ.16ರಂದು ಕೋರಿ ಜಾತ್ರೆ. ವಾರ್ಷಿಕ ಜಾತ್ರೆ ಪ್ರತಿವರ್ಷ ಮೇ 2ರಿಂದ 9ರವರೆಗೆ ವಿಜೃಂಭಣೆಯಿಂದ ನಡೆಯುತ್ತದೆ.

ಪರ್ಜನ್ಯ ಜಪ:
ಬರಗಾಲದ ಸಂದರ್ಭದಲ್ಲಿ ಮಧ್ವಾಚಾರ್ಯರು ಕೊಕ್ಕಡಕ್ಕೆ ಬಂದಿದ್ದಾಗ, ಪರ್ಜನ್ಯ ಜಪ ಮಾಡಿದ್ದರು. ಆಗ ಮಳೆಯಾಗಿತ್ತು ಎಂಬ ಪ್ರತೀತಿಯಿದೆ. ಇಲ್ಲಿ ಪರ್ಜನ್ಯ ಜಪ ಮಾಡಿದರೆ ಈಗಲೂ ಮಳೆಯಾಗುತ್ತದೆ.
– ಸತ್ಯನಾರಾಯಣ ಭಟ್, ಆಡಳಿತ ಮೊಕ್ತೇಸರರು

ಭಕ್ತರ ನಂಬಿಕೆ
ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸಿಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಕ್ಷೇತ್ರ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದೆ. ನಿತ್ಯ ಅನ್ನ ಸಂತರ್ಪಣೆಯ ಸಂಕಲ್ಪ ಮಾಡಿದ್ದೇವೆ.
– ಹರೀಶ್ ಭಟ್, ಭಕ್ತರು

(ಈ ಲೇಖನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: