ಕುಡ್ಲ, ಕೋರಿ-ರೊಟ್ಟಿ ಮತ್ತು ಮಲಾನಿ!
Posted December 23, 2012
on:ಹುಟ್ಟೂರಿನ ಮೇಲಿನ ಅಭಿಮಾನವೆಂದರೆ ಹಾಗಿರುತ್ತದೆ. ಎಲ್ಲೇ ಎಷ್ಟೇ ದೂರ ಹೋದರೂ, ಮಂಗಳೂರು ಎಂದಾಗ ಒಳಗೊಳಗೆ ಆಗುವ ಸಂಭ್ರಮವೇ ಬೇರೆ. ನನ್ನೂರು, ನಾನು ತಿರುಗಾಡಿದ ರಸ್ತೆಗಳು, ಅದೇ ಹಂಪನಕಟ್ಟೆ ಸಿಗ್ನಲ್, ಸ್ಟೇಟ್ ಬ್ಯಾಂಕಿನ ಮೀನು ಮಾರುಕಟ್ಟೆ, ಲೇಡಿಗೋಷನ್ ಗಲ್ಲಿ, ಸೆಂಟ್ರಲ್ ಮಾರ್ಕೆಟ್, ಪಣಂಬೂರು ಬೀಚ್ ಹೀಗೆ.. ಇಲ್ಲಿದ್ದಾಗ ಇಷ್ಟವಿಲ್ಲದ ಜಾಗಗಳೂ ಎಲ್ಲೋ ಹೋದಾಗ ಕಾಡಲಾರಂಭಿಸುತ್ತವೆ, ಇಷ್ಟವಾಗುತ್ತವೆ.
ಹೆಸರು ಸಂದೀಪ್ ಮಲಾನಿ. ಮುಂಬೈಯಲ್ಲಿ ಹುಟ್ಟಿ ಮಂಗಳೂರಿನಲ್ಲಿ ಆಡಿ ಬೆಳೆದು ಮುಂಬೈ ಸೇರಿಕೊಂಡವರು. ಬಾಲಿವುಡ್, ಕಿರುಚಿತ್ರ ನಿರ್ದೇಶಕನಾಗಿ ದೊಡ್ಡ ಹೆಸರು ಮಾಡಿದ್ದಾರೆ. ಆದರೂ ಕುಡ್ಲದ ಮೋಹ ಬಿಟ್ಟಿಲ್ಲ. ಊರಲ್ಲಿ ಯಾರದೋ ಮದುವೆಯಿದೆ ಎಂದಾಗ, ಅದೇ ಒಂದು ನೆಪವೆಂಬಂತೆ ಮಂಗಳೂರಿಗೆ ಓಡೋಡಿ ಬರುತ್ತಾರೆ. ಎಲ್ಲವನ್ನೂ ಮರೆತು ಕರಾವಳಿಯ ಅಂಗಳದಲ್ಲಿ ಕುಂಟೆಬಿಲ್ಲೆ ಆಡಿ ಮತ್ತೆ ವ್ಯಾಪಾರದ ನಗರಿಗೆ ಮರಳುತ್ತಾರೆ. ಹಾಗೆ ಹೋದವರು ಆಗಾಗ ಅಮ್ಮನಲ್ಲಿ ಹೇಳುವುದು ಇಷ್ಟೇ-ಯಾವುದಾದರೂ ಕಾರ್ಯಕ್ರಮ ಇದ್ದರೆ ಪ್ಲೀಸ್ ಹೇಳಿ.
ಮಲಾನಿ ಹೆತ್ತವರು ಅತ್ತಾವರದಲ್ಲಿ ನೆಲೆಸಿದ್ದಾರೆ. ಇಲ್ಲಿಗೆ ಆಗಾಗ ಬರುವ ಮಲಾನಿ, ಮನಸೋ ಇಚ್ಛೆ ಮಂಗಳೂರು ಸುತ್ತುತ್ತಾರೆ. ಗೆಳೆಯರು, ಪಾರ್ಟಿ ಜತೆಗೆ ಕುಡ್ಲವನ್ನೇ ಅರೆದು ಕುಡಿದು ಬಿಡುತ್ತಾರೆ. ಇವರಿಗಂತೂ ಖುಷಿಯೋ ಖುಷಿ. ಎಷ್ಟಾದರೂ ಇದು ನನ್ನ ಊರಲ್ಲವೇ? ಇದು ನನ್ನದೇ ಭಾಷೆಯಲ್ಲವೇ ಎಂದು ಪ್ರಶ್ನಿಸುತ್ತಾರೆ ಮಲಾನಿ. ಇವರ ಮಾತಿನಲ್ಲಿ ಮಂಗಳೂರಿನ ಟಿಪಿಕಲ್ ಶೈಲಿ ಇನ್ನೂ ಮಾಯವಾಗಿಲ್ಲ ಅನ್ನೋದು ಎದ್ದು ಕಾಣುತ್ತದೆ.
ಶ್ರೀದೇವಿ ಅಂದ್ರೆ ಪ್ರಾಣ:
ಮಲಾನಿಗೆ ಅದ್ಯಾಕೋ ಏನೋ ಗೊತ್ತಿಲ್ಲ. ಶ್ರೀದೇವಿ ಬಂದು ಕೇಳಿದರೆ ಪ್ರಾಣ ಕೊಡಲೂ ಸಿದ್ಧ. ಭೇಟಿಗಾಗಿ ತಪಸ್ಸಿನಂತೆ ಕಾದವರಿಗೆ ಕೆಲ ತಿಂಗಳ ಹಿಂದಷ್ಟೇ ಶ್ರೀದೇವಿ ಸಿಕ್ಕಿದ್ದಾರೆ. ಅವರ ಜತೆಗೇ ಕೂತು ‘ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾ ನೋಡಿರುವ ಮಲಾನಿ ಈಗ ಶ್ರೀದೇವಿ ಬಗ್ಗೆ ಡಾಕ್ಯುಮೆಂಟರಿ ಮಾಡುವ ಸಿದ್ಧತೆಯಲ್ಲಿದ್ದಾರೆ. ಶ್ರೀದೇವಿಯ ಬಾಲ್ಯದಿಂದ ಈಗಿನವರೆಗಿನ ಎಲ್ಲ ಬೆಳವಣಿಗೆಗಳನ್ನು ದಾಖಲಿಸುವ ಯತ್ನ ಇವರದ್ದು.
ಸಾಮಾಜಿಕ ಕಳಕಳಿ:
ಮೊದಲ ಚಿತ್ರ ‘ಮಿಸ್ ಕ್ಯಾಲಿಫೋರ್ನಿಯಾ’. ನಂತರ ‘ಎಸ್ಎಂಎಸ್ 6260’. ಈಗ ‘ಜಾನ್ಲೇವಾ 555’. ಕಿರುಚಿತ್ರಗಳ ಸಾಲಿನಲ್ಲಿ ಜೋ ಜೋ ಲಾಲಿ, ಎಲ್ಲಾ ಓಕೆ ಲೋನ್ ಯಾಕೆ?, ಶಾಯದ್….ಹೀಗೆ ನಿರ್ದೇಶಿಸಿದ ಚಿತ್ರಗಳು ಸಾಮಾಜಿಕ ಕಳಕಳಿಯುಳ್ಳದ್ದು. ಇಷ್ಟೂ ಚಿತ್ರಗಳಲ್ಲಿ ಮಲಾನಿ ಕಮರ್ಷಿಯಲ್ ಆಗಿ ನಗುವಂತಾಗಿದ್ದು ‘ಜಾನ್ಲೇವಾ 555’ ಚಿತ್ರದಲ್ಲಿ. ಇದು ಇತ್ತೀಚೆಗಷ್ಟೇ ಮುಂಬೈಯಲ್ಲಿ 50 ದಿನ ಪೂರೈಸಿದೆ. ಕೆಲವು ಚಿತ್ರಗಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿವೆ. ಹಲವಾರು ಪ್ರಶಸ್ತಿಗಳು ಮಲಾನಿ ಮುಡಿಗೇರಿವೆ.
ಆಧುನಿಕತೆ, ಏಡ್ಸ್, ಸಾಲ, ಸಲಿಂಗಕಾಮ ಮುಂತಾದ ವಿಷಯಗಳಲ್ಲಿ ಸಿನಿಮಾ ಮಾಡಿರುವ ಇವರೀಗ ಕ್ಯಾನ್ಸರ್ ಮತ್ತು ಭ್ರೂಣಹತ್ಯೆಯನ್ನು ರೀಲ್ಗಿಳಿಸುತ್ತಿದ್ದಾರೆ. ಕನ್ನಡದಲ್ಲೂ ಚಿತ್ರ ನಿರ್ದೇಶಿಸುವ ಮಾತುಕತೆ ನಡೆಯುತ್ತಿದೆ. ಆದರೆ ಅದು ಇನ್ನಷ್ಟೇ ಅಂತಿಮವಾಗಬೇಕಿದೆ ಎನ್ನುತ್ತಾರೆ ಮಲಾನಿ. ಇದರ ನಡುವೆ ‘ಸಿನೆಮಲಾನಿ 100’ ಎಂಬ ಕನಸು ಮಲಾನಿ ಕೈಯಲ್ಲಿ ಅಂತಿಮ ರೂಪ ಪಡೆಯುತ್ತಿದೆ. ಭಾರತೀಯ ಚಿತ್ರರಂಗದ 100 ವರ್ಷಗಳ ಇತಿಹಾಸ ಸಾರುವ ಪ್ರಾಜೆಕ್ಟ್ ಶೀಘ್ರದಲ್ಲೇ ಎಲ್ಲರ ಮುಂದೆ ಬರುವ ನಿರೀಕ್ಷೆಗಳಿವೆ.
ತುಳು ಸಿನಿಮಾದ ಕನಸು:
ಬಂಗಾರ್ ಪಟ್ಲೇರ್, ಸೆಪ್ಟೆಂಬರ್ 8 ಮುಂತಾದ ತುಳು, ಕೊಂಕಣಿ ಚಿತ್ರಗಳಲ್ಲಿ ನಟಿಸಿದ್ದೇನೆ. ನನ್ನ ಭಾಷೆಯಲ್ಲಿ (ತುಳು-ಕೊಂಕಣಿ) ಚಿತ್ರ ನಿರ್ದೇಶಿಸಬೇಕು ಎನ್ನುವುದು ಕನಸು. ಕಥೆ ಸಿದ್ಧವಾಗಿದೆ, ನಿರ್ಮಾಪಕರು ಸಿಗುತ್ತಿಲ್ಲ.
ಮಲಾನಿ ಇಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ, ಸ್ಟಾರುಗಳ ಚಿತ್ರ ನಿರ್ದೇಶಿಸಿಲ್ಲವಲ್ಲ? ಇದಕ್ಕೆ ಉತ್ತರವೂ ಸಿದ್ಧ. ಹೊಸಬರಿಗೆ ಅವಕಾಶ ಕೊಡಬೇಕು ಎನ್ನುವುದು ನನ್ನ ಉದ್ದೇಶ; ಎಷ್ಟೋ ಮಂದಿ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಯಾರೂ ಚಾನ್ಸ್ ಕೊಟ್ಟಿರುವುದಿಲ್ಲ. ಅಂಥವರನ್ನು ಪ್ರೋತ್ಸಾಹಿಸೋಣ. ಈಗ ನನ್ನ ಹೊಸ ಪ್ರಾಜೆಕ್ಟ್ ‘ಸಿನೆಮಲಾನಿ’ಯಲ್ಲಿ 500ಕ್ಕೂ ಹೆಚ್ಚು ಕಲಾವಿದರಿದ್ದಾರೆ. ಹಾಗೆಂದು ನಾನು ಸ್ಟಾರ್ಗಳ ಸಿನಿಮಾ ಮಾಡುವುದಿಲ್ಲ ಎಂದಲ್ಲ. ನೋಡೋಣ ಎನ್ನುತ್ತಾರೆ.
ಬನ್ಸ್, ಗೋಳಿಬಜೆ:
ಮಂಗಳೂರು ನನ್ನ ಪ್ರಾಣ. ಅಲ್ಲಿ ಸಿಗುವ ಊಟ, ತಿಂಡಿ ಬೇರೆಲ್ಲೂ ಸಿಗುವುದಿಲ್ಲ. ಅದರಲ್ಲೂ ಕೋರಿ ರೊಟ್ಟಿ, ಚಿಕನ್ ಸುಕ್ಕಾ, ಮೀನು ಅಂದರೆ ನನಗೆ ತುಂಬಾ ಇಷ್ಟ. ಬನ್ಸ್, ಗೋಳಿಬಜೆಯನ್ನಂತೂ ಮಿಸ್ ಮಾಡೋದೇ ಇಲ್ಲ.
– ಸಂದೀಪ್ ಮಲಾನಿ, ನಿರ್ದೇಶಕ
(ಈ ಲೇಖನ ವಿಜಯವಾಣಿಯಲ್ಲಿ ಪ್ರಕಟವಾಗಿದೆ)
Leave a Reply