ಪ್ರೀತಿಯ ಹೂಗಳು…

ಆ ಒಂದು ಕ್ಷಣ ಇಲ್ಲದೇ ಇರುತ್ತಿದ್ದರೆ…

Posted on: March 20, 2012

ಜೀವನ ಯಾರೋ ಬರೆದ ಗ್ರಂಥವಲ್ಲ, ಒಪ್ಪ-ಓರಣವಾಗಿ ಜೋಡಿಸಿಟ್ಟ ಲೈಬ್ರೆರಿಯೂ ಅಲ್ಲ. ಯಾವ ಕ್ಷಣದಲ್ಲಿ, ಏನು ಬೇಕಾದರೂ ನಡೆಯಬಹುದು, ನಡೆಯದೇ ಇರಲೂ ಬಹುದು. ನಡೆದರೆ ಅನುಭವ, ನಡೆಯದಿದ್ದರೆ ನಿರ್ವಿಕಾರ.

ಬರೀ ಅದರಿಂದಾಗಿ ಹೀಗೆಲ್ಲಾ ನಡೆಯಿತು. ಆ ಒಂದು ಕ್ಷಣ ನನ್ನ ಬದುಕಲ್ಲಿ ಬರದೇ ಹೋಗಿದ್ದಿದ್ದರೆ..? ಹೀಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ಸಲ ಯೋಚನೆ ಮಾಡಿಯೇ ಇರುತ್ತೀರಿ. ಅಂತಹದ್ದೊಂದು ಆಕಸ್ಮಿಕ, ಆಘಾತಕಾರಿ ಕ್ಷಣ ನಿಮ್ಮನ್ನೂ ಬಾಧಿಸಿರುತ್ತದೆ.

ನಿಮ್ಮ ಪಾಲಿಗೆ ಅದೊಂದು ಕೆಟ್ಟ ಕ್ಷಣ. ಯಾರ ಮೇಲೂ ಆರೋಪ ಹೊರಿಸಲಾಗದ ಸ್ವಯಂಕತಾಪರಾಧಗಳ ಎಫ್‌ಐಆರ್. ಯಾರ ಮೇಲಾದರೂ ಆರೋಪ ಹೊರಿಸೋಣವೆಂದರೆ ಕಣ್ಣೆದುರು ನಿಮ್ಮದೇ ಚಿತ್ರ ಬಂದು ಬಿಡುತ್ತದೆ. ಬೇರೆ ಯಾರೂ ಮಾಡಿರದ ತಪ್ಪಿಗಾಗಿ ನಿಮ್ಮನ್ನೇ ನೀವು ಶಪಿಸಬೇಕಾಗುತ್ತದೆ.

ಯಾಕೆ ಹೀಗೆ? ಇದಕ್ಕೆಲ್ಲ ಏನು ಕಾರಣ? ಅಂತಹದ್ದೊಂದು ನಮ್ಮದಲ್ಲದ ಅನಿರೀಕ್ಷಿತ ಕ್ಷಣ ಬದುಕಿನ ಬಂಡಿಯನ್ನು ಹೀಗೆ ಅಲುಗಾಡಿಸಿದ್ದಾದರೂ ಏತಕ್ಕೆ? ಅದೊಂದು ಕ್ಷಣ ಬರದೇ ಇದ್ದಿದ್ದರೆ, ಆ ಆಕಸ್ಮಿಕವೊಂದು ನಡೆಯದೇ ಇರುತ್ತಿದ್ದರೆ ಇಂದು ಎಷ್ಟು ಚೆನ್ನಾಗಿರುತ್ತಿತ್ತು, ಅಲ್ವೇ? ಹೀಗೆ ಮಂಥಿಸುವಾಗ ಬಗೆಬಗೆಯಲ್ಲಿ ಕಾಡಲು ವಿಷಯಗಳು ಸಿಗುತ್ತವೆ.

ದಾಟಿ ಬಿಟ್ಟರೆ ಸೇಫ್…

ಇಲ್ಲಿ ನಿರ್ದಿಷ್ಟ ವಿಚಾರಗಳನ್ನೇ ಹೇಳಬೇಕಾಗಿಲ್ಲ. ಆದರೆ ಪ್ರತಿಯೊಬ್ಬರೂ ಯಾವುದೋ ಕಾರಣಕ್ಕಾಗಿ ಅನುಭವಿಸಿರುವ ಅಕಾಲಿಕ ವೇದನೆ. ಯಾಕೆ ಹೀಗಾಯ್ತು ಅನ್ನೋದನ್ನು ಯೋಚಿಸುತ್ತಾ ಎಲ್ಲವನ್ನೂ ಮರೆತವರಂತೆ, ಮತ್ತೆ ಮತ್ತೆ ಯೋಚಿಸಿದರೂ ನೆನಪೇ ಆಗದಂತಹ ಸ್ಥಿತಿ.

ಕೆಲವೊಮ್ಮೆ ಕೆಲವರ ಬದುಕಿನಲ್ಲಿ ಇಂತಹ ಆಕಸ್ಮಿಕಗಳೇ ದಿನಚರಿಯಾಗಿ ಬಿಡುತ್ತವೆ. ಆದರೆ ಅವೆಲ್ಲವೂ ಆ ಕ್ಷಣಗಳ ನಂತರದ ರೋದನ. ಅದೊಂದು ಕ್ಷಣದ ಮೊದಲು ಮೊಗ್ಗುಲಾಬಿಯಂತಿದ್ದ ಬದುಕು, ಮರು ಕ್ಷಣವೇ ಅದೇ ಗುಲಾಬಿಯ ಮುಳ್ಳುಗಳಲ್ಲಿ ಸಿಕ್ಕಿ ಹಾಕಿಕೊಂಡಿರುತ್ತದೆ. ಆ ಕ್ಷಣವನ್ನು ಹೇಗೋ ದಾಟಿ ಬಿಟ್ಟಿದ್ದರೆ ನೋವಿನ ಅರಿವೇ ಆಗುತ್ತಿರಲಿಲ್ಲ. ಎಲ್ಲವೂ ಅಷ್ಟು ಸುರಕ್ಷಿತವಾಗಿರುತ್ತಿತ್ತು.

ದುರಂತ ಅಂದ್ರೆ, ಆ ಕ್ಷಣಗಳು ಸುಳಿವೇ ನೀಡದೆ ಬಂದೆರಗುತ್ತವೆ ಅನ್ನೋದು. ಮಗ್ಗುಲಿಗೆ ಬಡಿದು ಯಾವುದೋ ಒಂದು ಭಾಗವನ್ನು ಕಿತ್ತು ತೆಗೆದ ನಂತರವಷ್ಟೇ ನಿಮಗೆ ಅದೇನು ಅನ್ನೋದು ಅರಿವಿಗೆ ಬಂದಿರುತ್ತದೆ. ನೀವಾಗ ಪೂರ್ತಿಯೆಂದರೆ ಪೂರ್ತಿ ಅಸಹಾಯಕರಾಗಿರುತ್ತೀರಿ. ಹಣೆಬರಹವನ್ನು ಹಳಿಯುವುದನ್ನು ಬಿಟ್ಟರೆ ಬೇರೆ ದಾರಿಗಳೂ ನಿಮಗೆ ಉಳಿದಿರುವುದಿಲ್ಲ. ಅದುವರೆಗೂ ಬಾಧಿಸದ ಅಭದ್ರತೆಯ ಭಾವನೆಗಳು, ಇದು ತಮ್ಮ ಸರದಿಯೆಂಬಂತೆ ಕಾಡಲಾರಂಭಿಸುತ್ತವೆ.

ಆತ್ಮೀಯರು ಬೇಕೆನ್ನುವಾಸೆ…

ಅಂತಹ ಕ್ಷಣಗಳನ್ನು ಏಕಾಂಗಿಯಾಗಿ ಅನುಭವಿಸುವುದು ಎಂದರೆ ಸಾವಿನಂಚಿನ ಅನಿರ್ವಚನೀಯ ನೋವಿಗಿಂತಲೂ ಮಿಗಿಲು. ಜಗತ್ತಿನ ತುಂಬೆಲ್ಲ ನನ್ನಷ್ಟು ನೋವುಂಡವರು ಇನ್ಯಾರೂ ಇಲ್ಲ ಎಂಬ ಭಾವನೆಯ ಜನನದ ಕಾಲಘಟ್ಟವೂ ಇದೇ.

ಆ ಸೂತಕದ ಹೊತ್ತಿನಲ್ಲಿ ನಿಮಗೊಬ್ಬ ಆತ್ಮೀಯರೆನಿಸಿಕೊಂಡವರು ನೆನಪಾದರೆ ಬಚಾವ್ ಆದಂತೆ. ಅವರ ನೇವರಿಕೆಯನ್ನು ನೀವು ಬಯಸಿದರೆ ಬದುಕನ್ನು ಗೆಲ್ಲಲು ಹೊರಟಿದ್ದೇನೆ ಎಂದು ಜಗತ್ತಿಗೆ ಸಾರಿಕೊಂಡಂತೆ. ನಿಜಕ್ಕೂ ಆ ವ್ಯಕ್ತಿ ಅಷ್ಟೊಂದು ಆತ್ಮೀಯನಾಗಿದ್ದರೆ ನಿಮ್ಮ ಮನದಲ್ಲಿ ಆವರಿಸಿದ್ದ ಕತ್ತಲೆ ಒಮ್ಮಿಂದೊಮ್ಮೆಲೆ ಸರಿಯಬಹುದು. ಅಷ್ಟಾಗದೇ ಇದ್ದರೂ ಕನಿಷ್ಠ ಬದುಕಿನ ಬಗ್ಗೆ ಒಂದಷ್ಟು ನಿರೀಕ್ಷೆಗಳು ಚಿಗಿತುಕೊಳ್ಳಬಹುದು.

ಮರೆಯಿರಿ, ಮುನ್ನಡೆಯಿರಿ…

ಅದು ಘಟಿಸಲೇಬೇಕಾಗಿತ್ತು, ಘಟಿಸಿದೆ ಎನ್ನುವುದು ಧನಾತ್ಮಕ. ಮುಂದೆ ಮತ್ತೆ ಹೀಗಾಗಬಹುದು ಅನ್ನೋದು ಋಣಾತ್ಮಕ. ಆದರೂ, ಎಚ್ಚರಿಕೆ ವಹಿಸುವುದು ಜಾಣತನ. ನಿಮ್ಮ ಎಚ್ಚರಿಕೆ ಘಟನೆಯನ್ನು ತಡೆಯುತ್ತದೆ ಎಂದೇ ಹೇಳಲಾಗದು. ಆದರೆ ಕನಿಷ್ಠ ನೀವು ಅನಿರೀಕ್ಷಿತತೆಗೆ ತೆರೆದುಕೊಳ್ಳುವುದರಿಂದ ಭಾರೀ ಮಾನಸಿಕ ಆಘಾತ ಅನುಭವಿಸುವುದು ಕಡಿಮೆಯಾಗಬಹುದು.

ತಪ್ಪು ನಿಮ್ಮಿಂದಲೇ ನಡೆದಿರಬಹುದು ಅಥವಾ ಬೇರೆ ಯಾರೇ ಮಾಡಿರಬಹುದು. ಆದರೆ ಅದಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಆ ಕ್ಷಣಗಳಿಗೆ ನಿಮ್ಮದೇ ಕಾರಣಗಳಿರುತ್ತವೆ. ಅದಕ್ಕಾಗಿ ಕೊರಗದಿರಿ, ವಾದವೂ ಬೇಡ; ನಿಮ್ಮಷ್ಟಕ್ಕೆ ನೀವೇ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ. ಅದರ ಖುಷಿಯನ್ನು ಅನುಭವಿಸಿ. ಅದು ಸೋಲಲ್ಲ, ಗೆಲುವಿನ ಆರಂಭ. ಇನ್ನೊಂದು ಸೋಲನ್ನು ಸೋಲಿನ ನಿರೀಕ್ಷೆಯಿಂದಲೇ ಎದುರಿಸಿ ವಾಸ್ತವದಲ್ಲಿ ಗೆಲ್ಲುವ ತಯಾರಿ.

ಹೀಗೂ ಯೋಚಿಸಿ…

* ಘಟಿಸಿ ಹೋದ ಸಂಗತಿಗೆ ವಿಷಾದ ಯಾಕೆ? ಅದು ತಪ್ಪಿರಬಹುದು, ಸರಿಯೇ ಇರಬಹುದು. ಜೀವನದ ಪ್ರತಿ ಪುಟಗಳು ಮತ್ತು ಅನಿರೀಕ್ಷಿತ ತಿರುವುಗಳಿಂದಲೇ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಂಡಿರುತ್ತದೆ.

* ಜೀವನ ಅನ್ನೋದು ಅನಿರೀಕ್ಷಿತ ತಿರುವುಗಳಿಂದಲೇ ತುಂಬಿರುತ್ತದೆ. ಆದರೆ ನಾವು ಎಲ್ಲಿರಬೇಕೋ, ಅದನ್ನು ತಡೆಯಲು ಆ ತಿರುವುಗಳಿಗೆ ಅವಕಾಶ ನೀಡಬೇಡಿ.

* ಜೀವನವನ್ನು ಪ್ರೀತಿಸುವಲ್ಲಿ ವಿಷಾದವೇ ಬೇಡ. ಗೊಂದಲಗಳಿವೆ ಅನ್ನೋವಾಗ ನಕ್ಕು ಬಿಡಿ. ಕಣ್ಣೀರಲ್ಲೂ ಸುಖವಿರಲಿ. ಆಗೋದೆಲ್ಲ ಒಳ್ಳೇದಕ್ಕೆ ಎಂಬುದನ್ನು ಆಗಾಗ ನೆನಪಿಸಿಕೊಳ್ಳಿ.

* ಎಲ್ಲಾ ಕಥೆಗಳಿಗೂ ಅಂತ್ಯ ಇದ್ದೇ ಇರುತ್ತದೆ. ಆದರೆ ಜೀವನದಲ್ಲಿ ಬರೋ ಪ್ರತಿ ಅಂತ್ಯ ಇನ್ನೊಂದು ಆರಂಭದ ಆರಂಭವಷ್ಟೇ.

* ತಪ್ಪುಗಳಿಂದಲೂ ಒಳ್ಳೆಯದಾಗಬಹುದು. ಯಾಕೆಂದರೆ ತಪ್ಪು ಅನ್ನೋದು ಯಾವತ್ತೂ ಅನಿರೀಕ್ಷಿತ ಸಂಗತಿಯಾಗಿರುತ್ತದೆ.

(ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: